ಪ್ರತಿನಿಧಿ ವರದಿ ತಲಕಾಡು
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಐಚ್ಛಿಕ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಒಟ್ಟು 19 ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ ಮೇದಿನಿ ಗ್ರಾಮದ ವಿದ್ಯಾರ್ಥಿನಿ ವಿ.ತೇಜಸ್ವಿನಿ ಅವರನ್ನು ತಲಕಾಡಿನ ಗೂಳಬೋಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ತೇಜಸ್ವಿನಿ ಅವರ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಶಾಲೆಯ ಹಳೆಯ ವಿದ್ಯಾರ್ಥಿ ಸಿಂಗಪೂರ್ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಮಹತ್ವದ ಸಾಧನೆ ಮಾಡಿರುವುದು ನಾವೆಲ್ಲರೂ ಹೆಮ್ಮೆಪಡುವ ವಿಚಾರ. ತೇಜಸ್ವಿನಿ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ, ಪ್ರೇರಣೆ ನೀಡಿದೆ ಎಂದು ಶ್ಲಾಘಿಸಿದರು.
ದಾನಿ ಮುರಳೀಧರ್ ಮಾತನಾಡಿ, ತೇಜಸ್ವಿನಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದು, ನಾವೇ ಚಿನ್ನದ ಪದಕ ಪಡೆದಷ್ಟು ಸಂತೋಷವಾಗಿದೆ. ತೇಜಸ್ವಿನಿಯಂತೆ ಇತರ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಗ್ರಾಮಕ್ಕೆ ಕೀರ್ತಿ ತರಬೇಕೆಂದು ಆಶಯ ವ್ಯಕ್ತಪಡಿಸಿದರು.
ಶ್ರೀ ವಾಲ್ಮೀಕಿ ಸಂಘದ ದೇವರಾಜು ಕಾಟೂರು ಮಾತನಾಡಿ, ಇತರ ವಿದ್ಯಾರ್ಥಿಗಳು ಕಷ್ಡಪಟ್ಟು ವಿದ್ಯಾಭ್ಯಾಸ ಮಾಡಿ ತೇಜಸ್ವಿನಿಯಂತೆ ಸಾಧನೆ ಮಾಡುವಂತೆ ಹುರಿದುಂಬಿಸಿದರು.
ಮುಖ್ಯ ಶಿಕ್ಷಕಿ ಎಸ್.ಎಂ.ಗಾಯತ್ರಿ, ಸಹ ಶಿಕ್ಷಕರಾದ ನಳಿನಾಕುಮಾರಿ, ತುಳಸಿಬಾಯಿ, ಪ್ರವೀಣ್ ಕುಮಾರ್, ನಜ್ರುಲ್ಲ, ಸಜೀಲ ಪರ್ವಿನ್, ದಾಕ್ಷಾಯಿಣಿ, ಬಂಗಾರ ನಾಯಕ, ಚೌಡಯ್ಯ, ಎಸ್ ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಶಾಂತಕುಮಾರ್, ಮೂರ್ತಿ, ಗೀತಾ ಇತರರು ಪಾಲ್ಗೊಂಡಿದ್ದರು.
ಚಿತ್ರಶೀರ್ಷಿಕೆ
ತೇಜಸ್ವಿನಿ ಭಾವಚಿತ್ರ ಹಾಗು ಶಾಲೆಯ ಗುರುಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಿದ ಚಿತ್ರನೋಟ.