ಮೈಸೂರು: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೊತೆಯಿರಲು ಮೈಸೂರಿಗೆ ಆಗಮಿಸಿರುವ ಹೆಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡೋದೆಲ್ಲ ಅಹಂಕಾರದ ಮಾತುಗಳು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಹಿಂದೆ ವಿಧಾನ ಸಭೆಯಲ್ಲಿ ಅವರು ಪೈಲ್ವಾನರ ಹಾಗೆ ಭುಜ ಮತ್ತು ತೊಡೆ ತಟ್ಟಿದ್ದರಲ್ಲ? ಅಂಥ ಕೆಲಸಗಳನ್ನು ನಾವು ಯಾವತ್ತೂ ಮಾಡಿಲ್ಲ ಎಂದರು. ಜೆಡಿಎಸ್ ಈಗ ಬಿಜೆಪಿ ಜೊತೆ ಕೈ ಜೋಡಿಸಿರುವುದರಿಂದ ಪಕ್ಷದ ಹೆಸರಲ್ಲಿರುವ ಜಾತ್ಯಾತೀತ ಪದವನ್ನು ತೆಗೆದು ಹಾಕಬೇಕು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದಕ್ಕೆ ಮಾತನಾಡಿ ಅಸಲಿಗೆ, ಒಕ್ಕಲಿಗ, ಲಿಂಗಾಯತ ಅಂತ ಜಾತಿ ರಾಜಕಾರಣ ಮಾಡುತ್ತಿರೋದೇ ಕಾಂಗ್ರೆಸ್ ಪಕ್ಷ, ಅವರಿಂದ ಹೇಳಿಸಿಕೊಳ್ಳಬೇಕಾದ್ದು ಏನೂ ಇಲ್ಲ ಎಂದರು. ತಾನು ಎರಡು ದಿನಗಳ ಕಾಲ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಪ್ರಚಾರ ಮಾಡೋದಾಗಿ ಹೇಳಿದ ಕುಮಾರಸ್ವಾಮಿ, ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ದೇವೇಗೌಡ ಸಹ ಜೊತೆಗಿರಲಿದ್ದಾರೆ ಎಂದರು.