ಪ್ರತಿನಿಧಿ ವರದಿ ಹುಣಸೂರು
ಜೀವಜಲವನ್ನು ಉಳಿಸಿಕೊಳ್ಳುವ ಮೂಲಕ ಸಕಲ ಜೀವರಾಶಿಗಳನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಕರೆ ನೀಡಿದರು.
ತಾಲೂಕು ಪಂಚಾಯಿತಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜನೆಗೊಂಡಿದ್ದ ವಿಶ್ವ ಜಲ ದಿನಾಚರಣೆ, ಕುಡಿಯುವ ನೀರು ನಿರ್ವಹಣೆ , ನೀರುಗಂಟಿಗಳಿಗೆ ಅರಿವು ಕಾರ್ಯಾಗಾರ ಮತ್ತು ಮತದಾನದ ಮಹತ್ವದ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭೂಮಂಡಲದ ಶೇ.೭೦ ಭಾಗ ನೀರಿದೆ. ಆದರೆ ಈ ಪೈಕಿ ಶೇ.೯೭.೫ರಷ್ಟು ನೀರು ಉಪ್ಪುನೀರು ಆಗಿದೆ. ಶೇ.೧.೫ ಭಾಗ ಹಿಮಗಡ್ಡೆಯಾಗಿದ್ದರೆ, ಕೇವಲ ಶೇ.೦.೫ರಷ್ಟು ಮಾತ್ರ ಕುಡಿಯಲು ಯೋಗ್ಯವಾದ ನೀರು ಎನಿಸಿಕೊಂಡಿದೆ. ಪರಿಸ್ಥಿತಿ ಹೀಗಿದ್ದರೂ ನಾವು ನೀರಿನ ಬಳಕೆಯನ್ನು ವಿವೇಚನೆಯಿಂದ ಮಾಡುತ್ತಿಲ್ಲ. ಮಹಾನಗರಪಾಲಿಕೆಗಳಲ್ಲಿ ನೀರನ್ನು ಲೀಟರ್ ಲೆಕ್ಕದಲ್ಲಿ ಅಳೆದು ಪಡೆಯುವಂತಹ ದುಸ್ಥಿತಿಗೆ ತಲುಪಿದ್ದೇವೆ.
ನೀರಿನ ಸಂರಕ್ಷಣೆ ಕುರಿತು ನೀರುಗಂಟಿಗಳಿಗೆ ಅರಿವು ಮೂಡಿಸಬೇಕು. ನೀರಿನ ಸದ್ಬಳಕೆ ಕುರಿತು ನೀರುಗಂಟಿಗಳು ತಮ್ಮ ವ್ಯಾಪ್ತಿಯ ಗ್ರಾಮೀಣರಿಗೆ ತಿಳಿಸುವ ಮೂಲಕ ಬದಲಾವಣೆ ತರಬೇಕಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ತಾಲೂಕು ಸಹಾಯಕ ಚುನಾವಣಾಧಿಕಾರಿ(ಎಆರ್ಒ) ಮಹಮದ್ ಹ್ಯಾರಿಸ್ ಸುಮೇರ್ ಮಾತನಾಡಿ, ಪ್ರತಿ ಹನಿ ನೀರು ಬೃಹತ್ ಸಾಗರವನ್ನು ಸೃಷ್ಟಿಸುತ್ತದೆ. ಅಂತೆಯೇ ಪ್ರತಿಯೊಬ್ಬ ಮತದಾರ ಮತ ಚಲಾಯಿಸಿದಲ್ಲಿ ಮಾತ್ರ ಸದೃಢ ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಸಾಧ್ಯ. ಏ.೨೬ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿರಿ. ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ನೀಡುವುದರೊಂದಿಗೆ ಮೂಲಭೂತ ಕರ್ತವ್ಯಗಳನ್ನೂ ನೀಡಿದ್ದು, ಅವುಗಳನ್ನು ಪಾಲನೆಯಲ್ಲಿ ವಿಮುಖರಾಗುವುದು ಬೇಡ. ನೀರಿನ ಸದ್ಬಳಕೆ ಮನೆಯಿಂದಲೇ ಅಗಲಿ ಎಂದು ಆಶಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ವೈ.ಮನುಪಟೇಲ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ ಮಾತನಾಡಿದರು. ವಿಶ್ವ ಜಲದಿನಾಚರಣೆ ಕುರಿತು ವಕೀಲ ಎಚ್.ವಿ.ವೆಂಕಟೇಶ್ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಡಾ.ಎಂ.ನಯನಾ, ನಗರಸಭೆ ಪೌರಾಯುಕ್ತೆ ಎಂ.ಲಕ್ಷ್ಮೀ, ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ, ತಾ.ಪಂ.ಇಒ ಶಿವಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಸಿ.ಹರೀಶ್ಕುಮಾರ್, ಕಾರ್ಯದರ್ಶಿ ಸಂದೀಪ್, ಎಇಇ ಮಹಮದ್ ಕಲೀಮ್ ಹಾಗೂ ಪಿಡಿಒಗಳು ಮತ್ತು ನೀರುಗಂಟಿಗಳು ಹಾಜರಿದ್ದರು. ಕಡ್ಡಾಯ ಮತದಾನದ ಕುರಿತು ಸಭೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
೨೮ಊUಓ೧: ಹುಣಸೂರು ನಗರದಲ್ಲಿ ಆಯೋಜಿಸಿದ್ದ ವಿಶ್ವ ಜಲದಿನಾಚರಣೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಎಆರ್ಒ ಮಹಮದ್ ಹ್ಯಾರಿಸ್ ಸುಮೇರ್, ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ವೈ.ಮನುಪಟೇಲ್ ಇತರರಿದ್ದಾರೆ.