ಮೈಸೂರು, ಜುಲೈ 22, 2026 : ದೇಶದಲ್ಲಿ ಕಾರ್ಯಾಚರಿಸುತ್ತಿರುವ ಇಸ್ಲಾಮಿಕ್ ಟ್ರಸ್ಟ್ಗಳು ಮತ್ತು ಸಂಸ್ಥೆಗಳ ಹಣಕಾಸಿನ ಮೂಲ ಹಾಗೂ ವ್ಯವಹಾರಗಳನ್ನು ಪೂರ್ಣ ಪ್ರಮಾಣದ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ, ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಇಸ್ಲಾಮಿಕ್ ಸಂಸ್ಥೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಸಂಯೋಜಕ ವಸಂತ್ ಕುಮಾರ್, ನಮ್ಮ ದೇಶದಲ್ಲಿದ್ದುಕೊಂಡು, ಇಲ್ಲಿನ ಗಾಳಿ-ನೀರು ಹಾಗೂ ಆಹಾರ ಸೇವಿಸುತ್ತಾ ದೇಶಕ್ಕೆ ದ್ರೋಹ ಬಗೆಯುವ ಸಂಸ್ಥೆಗಳ ವಿರುದ್ಧ ಸರ್ಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕಾತಿ ಮಾಡಿ ಸಿರಿಯಾಕ್ಕೆ ಕಳುಹಿಸಿರುವುದು ಹಾಗೂ ಅವರಿಗೆ ಆರ್ಥಿಕ ನೆರವು ನೀಡಿರುವ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಬೆಂಗಳೂರಿನ 8 ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ದೇಶಾದ್ಯಂತ ಇರುವ ಎಲ್ಲಾ ಇಸ್ಲಾಮಿಕ್ ಟ್ರಸ್ಟ್ಗಳ ಆರ್ಥಿಕ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಲೇಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಸಹ ಸಂಯೋಜಕ ಸಂದೇಶ್, ಚಂದ್ರು, ಸ್ವಾಮಿ, ರಾಜನ್, ಶಿವು ನಾಯಕ್, ಡಾ.ಶ್ರೇಯಸ್, ಪ್ರಮೋದ್, ಉಮೇಶ್, ಯಶೋದ, ದೂರ ರಾಜಣ್ಣ, ವಿನೋದ್ ಅರಸ್, ಜಗದೀಶ್, ರಾಘವೇಂದ್ರ, ಸ್ಕಂದ, ಅಭಿಷೇಕ್, ಆರ್ಯನ್, ಗಗನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
