ಚಿಕ್ಕಬಳ್ಳಾಪುರ : ದೇವನಹಳ್ಳಿಯಲ್ಲಿ ಏ.೧೯ ರಂದು ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ವೀರಶೈವ ಲಿಂಗಾಯತ ಸಮುದಾಯದ ಮಹಾಸಮಾವೇಶವನ್ನು ಏರ್ಪಡಿಸಿದ್ದು, ಸಮಾವೇಶದಲ್ಲಿ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಲಾಗುವುದು ಎಂದು ಸಮುದಾಯದ ಮುಖಂಡ ಎಚ್.ವಿ.ಸೋಮಶೇಖರ್ ತಿಳಿಸಿದರು.
ದೇವನಹಳ್ಳಿಯಲ್ಲಿ ನಡೆಯಲಿರುವ ವೀರಶೈವ ಲಿಂಗಾಯತ ಸಮುದಾಯದ ಸಮಾವೇಶದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿಗಳಾದ ಜ್ಯೋತಿ ಪ್ರಕಾಶ್ ಮಿರ್ಜಿ, ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಎಂ.ಶಿವಾನದ್ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮುಕ್ತಾಮುನಿಯಪ್ಪ ಸೇರಿ ಸಮುದಾಯದ ಹಲವರು ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು..
ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವ ಅನಿವಾರ್ಯತೆ ಇರುವುದರಿಂದ ಸುಧಾಕರ್ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು. ಲೋಕಸಭಾ ಕ್ಷೇತ್ರದಲ್ಲಿರುವ ೧.೫ ಲಕ್ಷದ ವೀರಶೈವ ಲಿಂಗಾಯಿತರು ಏಕಪಕ್ಷೀಯವಾಗಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು ಬೆಂಬಲಿಸಲಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
ಮುಖಂಡ ಮುದ್ದವೀರಪ್ಪ ಮಾತನಾಡಿ, ಅಧಿಕಾರ ಹಾಗೂ ಅವಕಾಶಗಳಿಂದ ವಂಚಿತರಾಗಿರುವ ಸಮುದಾಯವು ಸಂಘಟಿತರಾಗಿ ತಮ್ಮ ನಿಲುವನ್ನು ಪ್ರಕಟಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸಮಾವೇಶವು ಪ್ರಮುಖ ಪಾತ್ರ ವಹಿಸಲಿದೆ. ಬಹಿರಂಗ ಸಮಾವೇಶದಲ್ಲಿ ದೇಶದ ಹಿತದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮುಖಂಡರಾದ ಹಳೇಹಳ್ಳಿ ಶಿವಕುಮಾರ್, ಅಶೋಕ್, ಹರೀಶ್ ತೇರದಾಳ, ಗಿರೀಶ್ ದೇವನಹಳ್ಳಿ, ಮುದ್ದುವೀರಪ್ಪ, ಗೀತಾ ಬಸವರಾಜ್, ಪುಷ್ಪ ಶಿವಕುಮಾರ್, ಪ್ರಿಯಾಂಕ, ರಾಜೇಂದ್ರ ಪ್ರಸಾದ್ ಇದ್ದರು.
Leave a comment