ಮೈಸೂರು, ಜನವರಿ 21, 2026 : ರಾಜ್ಯ ರಾಜಕಾರಣದ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಶಾಸಕ ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ ಮೈಸೂರಿನಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಬೇಕು ಎಂಬುದು ನಮ್ಮ ಆಸೆಯಾಗಿದ್ದು, ಈಗಾಗಲೇ ಅವರು ಬಜೆಟ್ ಮಂಡನೆಗೆ ಸಕಲ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸ್ವತಃ ಸಿಎಂ ಅವರೇ ಹೇಳಿರುವುದರಿಂದ, ಅವರು ಪೂರ್ಣಾವಧಿ ಅಧಿಕಾರದಲ್ಲಿ ಇರುತ್ತಾರೆ ಎಂಬ ದೃಢ ನಂಬಿಕೆ ನಮಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುರಿತು ಮಾತನಾಡಿದ ರಾಜೇಂದ್ರ, ಶಿವಕುಮಾರ್ ಅವರು ಸಿಎಂ ಆಗುವುದಕ್ಕೆ ಯಾರ ವಿರೋಧವೂ ಇಲ್ಲ, ಅಂತಿಮವಾಗಿ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು. ನನ್ನ ತಂದೆ ಕೆ.ಎನ್. ರಾಜಣ್ಣ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ವೈಯಕ್ತಿಕ ಜಗಳಗಳಿಲ್ಲ. ಅವರಿಬ್ಬರು ಹಳೆಯ ಸ್ನೇಹಿತರಾಗಿದ್ದು, ರಾಜಕೀಯ ನಿಲುವುಗಳಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿರಬಹುದು. ಹೊರನೋಟಕ್ಕೆ ಏನೇ ಕಂಡರೂ ಅವರಿಬ್ಬರ ಸಂಬಂಧ ಅನ್ಯೋನ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ತಮ್ಮ ತಂದೆಯ ಸಚಿವ ಸ್ಥಾನದ ಬಗ್ಗೆಯೂ ಮಾತನಾಡಿದ ಅವರು, ಮುಂದಿನ ಒಂದೆರಡು ತಿಂಗಳಲ್ಲಿ ಕೆ.ಎನ್. ರಾಜಣ್ಣ ಅವರು ಮತ್ತೆ ಸಚಿವರಾಗಿ ಸಂಪುಟ ಸೇರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಕುರಿತು ಮುಖ್ಯಮಂತ್ರಿಗಳು ಕೂಡ ತಮ್ಮ ಬಳಿ ಪ್ರಸ್ತಾಪ ಮಾಡಿದ್ದಾರೆ. ಹಿಂದೆ ಸತ್ಯ ಹೇಳಿದ್ದಕ್ಕೆ ನಮ್ಮ ತಂದೆಯವರನ್ನು ಟಾರ್ಗೆಟ್ ಮಾಡಿ ಸಚಿವ ಸ್ಥಾನದಿಂದ ಇಳಿಸಲಾಗಿತ್ತು. ಕಾಮಾಲೆ ಕಣ್ಣಿನವರಿಗೆ ಎಲ್ಲವೂ ಹಳದಿಯಾಗಿ ಕಾಣುವಂತೆ, ಕೆಲವರಿಗೆ ಸತ್ಯ ಕಹಿಯಾಗಿತ್ತು. ಸದ್ಯ ನಾಯಕ ಸಮುದಾಯಕ್ಕೆ ಸಚಿವ ಸ್ಥಾನದ ಪ್ರಾತಿನಿಧ್ಯದ ಅಗತ್ಯವಿದ್ದು, ಸಮುದಾಯದ ಒತ್ತಾಯವೂ ಹೆಚ್ಚಾಗಿದೆ. ರಾಜಣ್ಣ ಅವರ ಕೆಲಸದ ವೇಗ ಎಂದೂ ಕಡಿಮೆಯಾಗಿಲ್ಲ, ಅವರು ಸಚಿವರಾದ ತಕ್ಷಣ ಆ ವೇಗ ಮತ್ತೆ ಜನರಿಗೆ ತಿಳಿಯಲಿದೆ ಎಂದು ಹೇಳಿದರು.
ಮೈಸೂರಿಗೆ ಆಗಮಿಸಿದ್ದ ರಾಜೇಂದ್ರ ಅವರು ಮೈಸೂರು ಸಿಲ್ಕ್ ಮಳಿಗೆಗೆ ಭೇಟಿ ನೀಡಿ ತಮ್ಮ ತಾಯಿಗಾಗಿ ಸೀರೆ ಖರೀದಿಸಿದರು. ಮೈಸೂರು ಸಿಲ್ಕ್ ಸೀರೆಗೆ ತನ್ನದೇ ಆದ ಇತಿಹಾಸವಿದ್ದು, ಭಾರಿ ಬೇಡಿಕೆಯಿದೆ. ಪ್ರಸ್ತುತ ದಿನಕ್ಕೆ 40 ರಿಂದ 50 ಸೀರೆಗಳನ್ನು ಮಾತ್ರ ತಯಾರಿಸಲಾಗುತ್ತಿದೆ, ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
