ಮೈಸೂರು, ನವೆಂಬರ್ 15, 2025 : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಮೈತ್ರಿಕೂಟಕ್ಕೆ ದೊರೆತ ಭರ್ಜರಿ ಜಯವನ್ನು ಸಂಸದ ಯದುವೀರ್ ಒಡೆಯರ್ ಅವರು ಅತ್ಯದ್ಭುತವಾದ ಫಲಿತಾಂಶ ಎಂದು ಬಣ್ಣಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮತ್ತು ಮೈತ್ರಿಕೂಟಕ್ಕೆ ಸಿಕ್ಕಿರುವ ಉತ್ತಮ ಫಲಿತಾಂಶ ಎಂದು ಹೇಳಿದರು.
ಇದು ಅತ್ಯದ್ಭುತವಾದ ಫಲಿತಾಂಶ. ನರೇಂದ್ರ ಮೋದಿ ಅವರ ನಾಯಕತ್ವಕ್ಕೆ, ಮೈತ್ರಿಕೂಟಕ್ಕೆ ಸಿಕ್ಕ ಉತ್ತಮ ಫಲಿತಾಂಶ. ಬಿಹಾರದ ಸಮಸ್ತ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ, ಎಂದು ಯದುವೀರ್ ಒಡೆಯರ್ ಹರ್ಷ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ವೋಟ್ ಚೋರಿ ನಡೆದಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪವನ್ನು ಸಂಸದರು ಸಂಪೂರ್ಣವಾಗಿ ತಳ್ಳಿಹಾಕಿದರು. ಕಾಂಗ್ರೆಸ್ ನಿರೂಪಣೆಗೆ ಬೆಲೆ ಇಲ್ಲ. ಸಾಕ್ಷಿ ಇದ್ದರೆ ಎಲೆಕ್ಷನ್ ಕಮಿಷನ್ಗೆ (ಚುನಾವಣಾ ಆಯೋಗ) ಹೋಗಿ ಕೊಡಿ ಅಂತ ಹೇಳಿದ್ದೀವಿ. ಇವತ್ತಿನವರೆಗೂ ಕೂಡ ಅವರು ಕೊಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವೋಟ್ ಚೋರಿಯನ್ನು ಚುನಾವಣೆ ತಂತ್ರವಾಗಿ ಬಳಕೆ ಮಾಡುತ್ತಿದ್ದಾರೆ ಅಷ್ಟೇ. ಜನರ ದಿಕ್ಕು ತಪ್ಪಿಸೋದು, ಅರ್ಧ ಸತ್ಯ ಅಪ ಪ್ರಚಾರ ಮಾಡೋದು ಕಾಂಗ್ರೆಸ್ನ ತಂತ್ರ ಎಂದು ಅವರು ಟೀಕಿಸಿದರು.
ಬಿಹಾರ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಾಯಕರ ವರ್ತನೆಯನ್ನು ಉಲ್ಲೇಖಿಸಿದ ಯದುವೀರ್, ಕಾಂಗ್ರೆಸ್ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.ಬಿಹಾರ ಎಲೆಕ್ಷನ್ ಟೈಮಲ್ಲಿ ಅವರ ನಾಯಕರು ವಿದೇಶದಲ್ಲಿ ಕುಳಿತು ಕಾಫಿ ಕುಡಿಯುತ್ತಿರುವುದನ್ನು ನೋಡಿದ್ದೇವೆ. ನಮ್ಮ ನಾಯಕರು ಹಳ್ಳಿ ಹಳ್ಳಿಗೂ ಹೋಗಿ ಕ್ಯಾಂಪೇನ್ ಮಾಡಿದ್ದಾರೆ,” ಎಂದು ತಮ್ಮ ನಾಯಕರ ಶ್ರಮವನ್ನು ಕೊಂಡಾಡಿದರು.ಜನರನ್ನು ಒಂದು ಸಂಪತ್ತು ಅಂದುಕೊಂಡರೆ, ಜನ ನಿಮಗೆ ಪಾಠ ಕಲಿಸುತ್ತಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಮಾತಿಗೂ ಬೆಲೆ ಇಲ್ಲ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೂ ತಿರುಗೇಟು ನೀಡಿದರು.
ವಿಕಸಿತ ಭಾರತದತ್ತ ನುಗ್ಗುತ್ತಿರುವ ದೇಶ: 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ
ರಾಜ್ಯದಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳುವ ವಿಚಾರವಾಗಿ ಮಾತನಾಡಿದ ಸಂಸದರು, ಕಾಂಗ್ರೆಸ್ ಪಕ್ಷವು ಅಭಿವೃದ್ಧಿ ರಾಜಕಾರಣದಿಂದ ದೂರವಿದೆ ಎಂದು ಆರೋಪಿಸಿದರು.75 ವರ್ಷದಲ್ಲಿ ಕಾಂಗ್ರೆಸ್ ಅಭಿವೃದ್ಧಿಗೆ ದೂರ. ಅಭಿವೃದ್ಧಿ ರಾಜಕಾರಣ ಕಾಂಗ್ರೆಸ್ ಮಾಡಲ್ಲ. ಸಮಾಜ ವಿಭಜನೆ ಮಾಡಿ ಲಾಭ ಪಡೆದುಕೊಳ್ಳಲು ಮುಂದಾಗುತ್ತದೆ ಎಂದು ದೂರಿದರು. ಭಾರತ ಈಗ ಏಕತೆಯಲ್ಲಿ ಮುನ್ನುಗ್ಗುತ್ತಿದೆ. ವಿಕಸಿತ ಭಾರತಕ್ಕೆ ಜನರ ಸ್ಪಂದನೆ ಇದೆ ಎಂದು ನುಡಿದರು. ಬಿಹಾರದ ಫಲಿತಾಂಶವನ್ನು ಉಲ್ಲೇಖಿಸಿ, ದೆಹಲಿ, ಮಹಾರಾಷ್ಟ್ರ, ಹರಿಯಾಣ, ಬಿಹಾರದಂತೆ 2028ಕ್ಕೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಣಕಾಸಿನ ಮಿತಿ ಮೀರಿದ ಗ್ಯಾರಂಟಿಗಳು: ಸರ್ಕಾರದ ಸಾಮರ್ಥ್ಯ ಪ್ರಶ್ನಿಸಿದ ಒಡೆಯರ್
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಅವುಗಳ ಹಣಕಾಸಿನ ನಿರ್ವಹಣಾ ಸಾಮರ್ಥ್ಯದ ಕೊರತೆಯನ್ನು ಎತ್ತಿ ತೋರಿಸಿದರು.ಗ್ಯಾರಂಟಿಗೂ, ಜನರ ಹಿತಕ್ಕಾಗಿ ಯೋಜನೆ ರೂಪಿಸುವುದಕ್ಕೂ ವ್ಯತ್ಯಾಸ ಇದೆ. ಹಣಕಾಸಿನ ಮಿತಿಯಲ್ಲಿ ಯೋಜನೆ ರೂಪಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.ಹಣಕಾಸಿನ ಯೋಜನೆ ರೂಪಿಸಲು ಸಾಮರ್ಥ್ಯ ಇಲ್ಲದ ಸರ್ಕಾರ ಹಣಕಾಸಿನ ಯೋಜನೆ ರೂಪಿಸಿದೆ. ಹೀಗಾಗಿ ಗ್ಯಾರಂಟಿ ಕೊಡಲಾಗದ ಪರಿಸ್ಥಿತಿಗೆ ಸರ್ಕಾರ ತಲುಪಿದೆ ಎಂದು ಟೀಕಿಸಿದರು.
