ಮೈಸೂರು, ಡಿಸೆಂಬರ್ 23, 2025 : ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಎರಡು ದಶಕಗಳಿಂದ ಚರ್ಚೆಯಲ್ಲಿದ್ದ ಬೊಮ್ಮೇನಹಳ್ಳಿ ಹೊಸ ಬಡಾವಣೆ ನಿರ್ಮಾಣಕ್ಕೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇಲವಾಲ ಹೋಬಳಿಯ 2113.24 ಎಕರೆ ಜಾಗ ಗುರುತಿಸಲಾಗಿದೆ. ಭೂಮಾಲೀಕರ ಒಪ್ಪಿಗೆ ಬಳಿಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಡಿಎ) ನಗರದಲ್ಲಿ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಮುಂದಾಗಿದ್ದು, ಸೋಮವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ನಿರ್ಧಾರಕ್ಕೆ ಒಪ್ಪಿಗೆ ದೊರೆತಿದೆ. ಬಡಾವಣೆ ನಿರ್ಮಾಣಕ್ಕೆ ಪ್ರತ್ಯೇಕ ಕಚೇರಿ, ಕ್ಷಿಪ್ರ ಕಾರ್ಯಪಡೆ ರಚನೆಗೂ ಒಪ್ಪಿಗೆ ನೀಡಲಾಗಿದೆ.ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಬೊಮ್ಮೇನಹಳ್ಳಿ, ನಾಗವಾಲ, ಕಮ್ಮರಹಳ್ಳಿ, ದೊಡ್ಡಮಾರಗೌಡನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿವಿಧ ಸರ್ವೆ ನಂಬರ್ಗಳನ್ನು ಗುರುತಿಸಿ ಹೊಸ ಬಡಾವಣೆ ಮಾಡಲಾಗುತ್ತದೆ. ಈಗಾಗಲೇ ನಾಗವಾಲ 429.13, ಬೊಮ್ಮೇನಹಳ್ಳಿ- 766.33, ದೊಡ್ಡಮಾರಗೌಡನಹಳ್ಳಿ-326.38, ಕಮ್ಮರಹಳ್ಳಿ-336.20 ಎಕರೆ ಸೇರಿದಂತೆ 2113.24 ಎಕರೆಯನ್ನು ಗುರುತಿಸಲಾಗಿದೆ.
ಯೋಜನೆಗೆ ಜಮೀನು ನೀಡುವ ಬಗ್ಗೆ ಆಸಕ್ತ ಭೂಮಾಲೀಕರಿಂದ ಒಪ್ಪಿಗೆ ಪತ್ರವನ್ನು ಪಡೆದು ತದನಂತರ, ಯೋಜನೆಗೆ ಅನುಮೋದನೆ ಪಡೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.ಬೊಮ್ಮೇನಹಳ್ಳಿ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಯೋಜನಾ ಕಚೇರಿಯನ್ನು ತೆರೆಯಲಾಗುತ್ತದೆ. ವಿಜಯನಗರದಲ್ಲಿರುವ ಎಂಡಿಎ ಆಸ್ತಿಯಲ್ಲಿ ಪ್ರತ್ಯೇಕವಾಗಿ ಕಚೇರಿಯನ್ನು ತೆರೆದು ಯೋಜನೆಗೆ ಬೇಕಾಗುವ ಎಲ್ಲ ಪ್ರಕ್ರಿಯೆಗಳನ್ನು ನಡೆಸಲು ಸುಲಭವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ.ಶಿಕ್ಷಣ, ಸಾಮಾಜಿಕ, ಆರೋಗ್ಯ ಸೇರಿದಂತೆ ಮತ್ತಿತರ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳಿಗೆ 300 ನಾಗರಿಕ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನ ಮಾಡಲಾಯಿತು.
ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಜತೆಗೆ, ಸಿಎ ನಿವೇಶನ ಮಂಜೂರು ಮಾಡಲು ವಿಧಿಸಲಾಗುವ ಷರತ್ತುಗಳನ್ನು ಪ್ರಕಟಿಸಲಾಗುತ್ತದೆ. ಈಗಾಗಲೇ ಹಲವು ವರ್ಷಗಳಿಂದ ಸಿಎ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಸಂಘ ಸಂಸ್ಥೆಗಳಿಗೆ ಹಿರಿತನದ ಆಧಾರದ ಮೇಲೆ ಮಂಜೂರು ಮಾಡಲಾಗುತ್ತದೆ.
