ಮೈಸೂರು, ಜುಲೈ 22, 2026 : ಪ್ರಸಕ್ತ ವರ್ಷದಲ್ಲಿ ಎಲ್-ನಿನೋ ಪ್ರಭಾವದಿಂದಾಗಿ ಸಾಧಾರಣಕ್ಕಿಂತ ಕಡಿಮೆ ಮಳೆ ಹಾಗೂ ತಾಪಮಾನ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲೆಯ ತೋಟಗಾರಿಕಾ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದ್ದು, ಬೆಳೆ ರಕ್ಷಣೆಗಾಗಿ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ರೈತರಿಗೆ ತುರ್ತು ಮುಂಜಾಗ್ರತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹವಾಮಾನ ವೈಪರೀತ್ಯದಿಂದಾಗಿ ತೋಟಗಾರಿಕಾ ಬೆಳೆಗಳಿಗೆ ಹಲವು ರೀತಿಯ ಹಾನಿಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ. ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿಯಲಿದೆ. ಇದರಿಂದ ಗಿಡಗಳಿಗೆ ಕ್ಯಾಲ್ಸಿಯಂ, ಬೋರಾನ್, ಜಿಂಕ್ ಮತ್ತು ಪೊಟ್ಯಾಷಿಯಂ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗದೆ ಹಣ್ಣುಗಳಲ್ಲಿ ಬಿರುಕು ಹಾಗೂ ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಬಿಸಿ ಹಾಗೂ ಒಣ ಹವಾಮಾನದಿಂದಾಗಿ ಕೆಂಪು ಜೇಡ, ಥ್ರಿಪ್ಸ್, ಬಿಳಿ ನೊಣ, ಗಿಡ ಹೇನು ಮತ್ತು ಮೀಲಿಬಗ್ಗಳಂತಹ ರಸ ಹೀರುವ ಕೀಟಗಳ ಬಾಧೆ ಹೆಚ್ಚಾಗಲಿದೆ.
- ಮಾವು: ಹೂ ಮತ್ತು ಹಣ್ಣುಗಳು ಉದುರುವುದು, ಗಾತ್ರ-ಗುಣಮಟ್ಟ ಕುಸಿಯುವುದು ಹಾಗೂ ಬೂದಿ ರೋಗದ ತೀವ್ರತೆ ಹೆಚ್ಚಾಗುವುದು.
- ಬಾಳೆ: ಎಲೆಗಳು ಸುಡುವುದು, ಬೆಳವಣಿಗೆ ಕುಂಠಿತಗೊಂಡು ಗೊಂಚಲ ತೂಕ ಕಡಿಮೆಯಾಗುವುದು.
- ತೆಂಗು: ಫಸಲು ಧಾರಣೆ ಕಡಿಮೆಯಾಗಿ, ಸುಸಿರೋಗ ಮತ್ತು ಕಪು ತಲೆ ಹುಳುವಿನ ಬಾಧೆ ಎದುರಾಗುವುದು.
ಬೆಳೆ ಹಾನಿ ತಡೆಯಲು ಹಾಗೂ ನೀರಿನ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ:
- ಮಣ್ಣು, ಮಳೆ ನೀರು ಸಂರಕ್ಷಣೆ: ತೋಟದ ಫಲವತ್ತತೆ ಹೆಚ್ಚಿಸಲು ಸಣಬು, ಡಯಾಂಚ, ಅಲಸಂದೆ ಅಥವಾ ಅವರೆಯಂತಹ ಹಸಿರೆಲೆ ಗೊಬ್ಬರದ ಬೆಳೆಗಳನ್ನು ವರ್ಷದಲ್ಲಿ ಎರಡು ಬಾರಿ ಬೆಳೆಯಬೇಕು. ತೆಂಗಿನ ತೋಟಗಳಲ್ಲಿ ಬಿದ್ದ ಗರಿಗಳು ಹಾಗೂ ಸಿಪ್ಪೆಗಳನ್ನು ಮರದ ಬುಡದ ಸುತ್ತಲೂ ಹಾಕಿ ಮಲ್ಚಿಂಗ್ (ಹೊದಿಕೆ) ಮಾಡಬೇಕು. ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಲು ಬೇಸಿಗೆ ಉಳುಮೆ, ಗಿ-ಆಕೃತಿಯ ಕಾಲುವೆಗಳು, ಅರ್ಧವೃತ್ತಾಕಾರದ ಬದುಗಳು ಹಾಗೂ ಇಂಗು ಗುಂಡಿಗಳನ್ನು ನಿರ್ಮಿಸಬೇಕು.
- ನೀರಾವರಿ ಹಾಗೂ ಬೆಳೆ ನಿರ್ವಹಣೆ: ಹನಿ ನೀರಾವರಿ ಪದ್ಧತಿಯನ್ನು ಬೆಳಗ್ಗೆ ಅಥವಾ ಸಂಜೆಯ ವೇಳೆಯಲ್ಲಿ ಬಳಸಬೇಕು. ನೀರಿನ ಅಭಾವವಿದ್ದಾಗ ಪರ್ಯಾಯ ಸಾಲು ನೀರಾವರಿ ಪದ್ಧತಿ ಅನುಸರಿಸುವುದು ಸೂಕ್ತ. ಗಿಡಗಳ ಪಾತಿಗಳಲ್ಲಿ 10-15 ಅಡಿ ವ್ಯಾಸದಲ್ಲಿ ಸಾವಯವ ಹೊದಿಕೆ ಅಳವಡಿಸಬೇಕು. ನೀರು ಆವಿಯಾಗುವುದನ್ನು ತಡೆಯಲು ಕಾಯೋಲಿನ್ ನಂತಹ ವಸ್ತುಗಳ ಬಳಕೆ, ಬೆಳೆಗಳ ಸವರವಿಕೆ ಹಾಗೂ ಬರ ಸಹಿಷ್ಣು ತಳಿಗಳ ಆಯ್ಕೆಗೆ ಆದ್ಯತೆ ನೀಡಬೇಕು. ವಿದ್ಯುತ್ ವ್ಯತ್ಯಯದ ಸಮಸ್ಯೆಗೆ ಪರ್ಯಾಯವಾಗಿ ಸೋಲಾರ್ ಪಂಪ್ಸೆಟ್ಗಳನ್ನು ಬಳಸುವುದು ಉತ್ತಮ.
ನೆರವಿಗಾಗಿ ಸಂಪರ್ಕಿಸಿ
ಬೆಳೆ ರಕ್ಷಣೆ ಹಾಗೂ ತಾಂತ್ರಿಕ ಸಲಹೆಗಳಿಗಾಗಿ ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಮೈಸೂರು (ಜಂಟಿ ನಿರ್ದೇಶಕರ ಕಚೇರಿ): 0821-2422255, ಮೈಸೂರು (ಹಿರಿಯ ಸಹಾಯಕ ನಿರ್ದೇಶಕರ ಕಚೇರಿ) 0821-2430450, ಹೆಚ್.ಡಿ.ಕೋಟೆ: 08228-297261, ಹುಣಸೂರು 08222-252447, ಕೆ.ಆರ್.ನಗರ 08223-262791, ಟಿ.ನರಸೀಪುರ 08227-297068ನ್ನು ಸಂಪರ್ಕಿಸಬಹುದು.
