ಮೈಸೂರು, ಡಿಸೆಂಬರ್ 23, 2025 :ಜನವಸತಿ ಪ್ರದೇಶಗಳಿಗೆ ಹುಲಿ ಮತ್ತು ಚಿರತೆಗಳು ಬಂದಿವೆ ಎಂದು ಸುಳ್ಳು ಮಾಹಿತಿ ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಡಿಸಿಎಫ್ ಪರಮೇಶ್ ಅವರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಮೈಸೂರಿನ ಅಶೋಕಪುರಂ ಬಳಿ ಚಿರತೆ ಬಂದಿದೆ ಎಂದು ನಂಬಿಸುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ತಯಾರಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಮರದ ಮೇಲೆ ಚಿರತೆ ಕುಳಿತಿರುವ ಮತ್ತು ನೀರು ಕುಡಿಯುತ್ತಿರುವಂತೆ ಬಿಂಬಿಸಲಾಗಿದ್ದ ಈ ಚಿತ್ರಗಳು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದ್ದವು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯು ಸೆನ್ ವಿಭಾಗದ ಪೊಲೀಸರ ಗಮನಕ್ಕೆ ತಂದು, ಫೋಟೋ ಹರಿಬಿಟ್ಟವರನ್ನು ಪತ್ತೆಹಚ್ಚಿ ಎಚ್ಚರಿಕೆ ನೀಡಿದೆ. ಸಾರ್ವಜನಿಕರು ಇಂತಹ ಪೋಟೋಗಳನ್ನು ನೋಡಿ ಭಯಪಡಬಾರದು ಮತ್ತು ಯಾವುದೇ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯದ ಅರಣ್ಯ ಸಂಪತ್ತಿನ ಬಗ್ಗೆ ಮಾತನಾಡಿದ ಡಿಸಿಎಫ್ ಪರಮೇಶ್, ಆನೆಗಳ ಸಂತತಿಯಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೆಮ್ಮೆಯಿಂದ ತಿಳಿಸಿದರು. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಆನೆಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ. ವಿಶೇಷವಾಗಿ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಇಲಾಖೆಯು ಈಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೊರೆ ಹೋಗಿದೆ. ಈ ನೂತನ ತಂತ್ರಜ್ಞಾನದ ಕ್ಯಾಮರಾಗಳನ್ನು ಅರಣ್ಯದಂಚಿನಲ್ಲಿ ಅಳವಡಿಸಲಾಗಿದ್ದು, ಇವು ಆನೆಗಳ ಚಲನವಲನದ ಮೇಲೆ ಸತತ ನಿಗಾ ಇಡಲಿವೆ.
ಈ ವಿಶೇಷ ಕ್ಯಾಮರಾಗಳು ಕಾಡಾನೆಗಳ ಸುಳಿವನ್ನು ಅತ್ಯಂತ ವೇಗವಾಗಿ ಗ್ರಹಿಸಿ ತಕ್ಷಣವೇ ಸಂಬಂಧಪಟ್ಟವರಿಗೆ ಸಂದೇಶ ರವಾನಿಸುತ್ತವೆ. ಒಂದು ವೇಳೆ ಆನೆಗಳು ತಡೆಬೇಲಿಗಳನ್ನು ದಾಟಿ ಗ್ರಾಮದತ್ತ ಬರಲು ಪ್ರಯತ್ನಿಸಿದರೆ, ಈ ಎಐ ಕ್ಯಾಮರಾಗಳು ಒಂದು ವಿಚಿತ್ರ ಶಬ್ದವನ್ನು ಹೊರಹೊಮ್ಮಿಸುತ್ತವೆ. ಈ ಶಬ್ದದಿಂದ ಗಲಿಬಿಲಿಗೊಳ್ಳುವ ಆನೆಗಳು ಭೀತಿಯಿಂದ ಮರಳಿ ಕಾಡಿನತ್ತ ಮುಖ ಮಾಡುತ್ತವೆ ಮತ್ತು ಪುನಃ ಅದೇ ಭಾಗದಿಂದ ಬರಲು ಹಿಂದೇಟು ಹಾಕುತ್ತವೆ. ಈ ವಿನೂತನ ತಂತ್ರಜ್ಞಾನವು ಅರಣ್ಯ ಇಲಾಖೆಯ ಸಿಬ್ಬಂದಿಗೆ ವರದಾನವಾಗಿ ಪರಿಣಮಿಸಿದ್ದು, ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಸಹಕಾರಿಯಾಗಲಿದೆ ಎಂದು ಡಿಸಿಎಫ್ ಪರಮೇಶ್ ಮಾಹಿತಿ ನೀಡಿದರು.
