ಮೈಸೂರು,ಜುಲೈ 21,2026 : ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಶ್ರೀಮತಿ ಚನ್ನಮ್ಮನವರ ನಿಧನದ ಹಿನ್ನೆಲೆಯಲ್ಲಿ, ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ದೇವರಾಜ ಮೊಹಲ್ಲಾದ ನಿವಾಸಿಗಳ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೃತರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್ ಗೌಡ ಚನ್ನಮ್ಮನವರು ಹೆಚ್.ಡಿ. ದೇವೇಗೌಡರ ಇಡೀ ಕುಟುಂಬಕ್ಕೆ ಬಹುದೊಡ್ಡ ಶಕ್ತಿಯಾಗಿದ್ದರು. ಇಡೀ ಕುಟುಂಬ ರಾಜಕೀಯವಾಗಿ ಅಪಾರ ಪ್ರಭಾವ ಹೊಂದಿದ್ದರೂ, ಅವರು ಎಲ್ಲೂ ಅದನ್ನು ದುರ್ಬಳಕೆ ಮಾಡಿಕೊಳ್ಳದೆ ಸರಳತೆ ಮೆರೆದರು. ಅವರ ಮೇಲೆ ಆಸಿಡ್ ದಾಳಿ ನಡೆದಂತಹ ಕಠಿಣ ಪರಿಸ್ಥಿತಿಯಲ್ಲೂ ಅವರು ಎದೆಗುಂದದೆ ನಿಂತರು. ಇಂದಿನ ಮಹಿಳೆಯರಿಗೆ ಅವರು ನಿಜಕ್ಕೂ ಆದರ್ಶ. ಮನೆಗೆ ಬಂದ ಯಾರೇ ಆದರೂ ಊಟ-ಉಪಚಾರ ವಿಚಾರಿಸದೆ ಕಳುಹಿಸುತ್ತಿರಲಿಲ್ಲ ಎಂದ ಪ್ರಶಾಂತ್ ಗೌಡ, ಅವರ ತ್ಯಾಗ ಮತ್ತು ಅಪಾರ ಪ್ರೀತಿಗೆ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಸಾಗರೋಪಾದಿಯ ಜನಸ್ತೋಮವೇ ಸಾಕ್ಷಿ ಎಂದರು. ಇಂದು ರಾಜ್ಯದ ಎಲ್ಲಾ ಜನತೆಯೂ ಪಕ್ಷಾತೀತವಾಗಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ , ಮುಡಾ ಮಾಜಿ ಸದಸ್ಯರು ರಮೇಶ್, ನಗರಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ರವಿಕುಮಾರ್, ಹೇಮಂತ್ ಗೌಡ, ಗುರುರಾಜ್ ಶೆಟ್ಟಿ, ಜ್ಞಾನೇಶ್, ಮಂಜು, ಕಿರಣ್, ಸುವರ್ಣಮ್ಮ, ಮಂಗಳಮ್ಮ, ನಂಜುಂಡಿ, ಯೋಗೇಶ್ ಸೇರಿದಂತೆ ಅನೇಕರು ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು.
