ರಾಮನಗರ: ಕಳೆದ ಬಾರಿ ಗಿಫ್ಟ್ ಹಂಚಿರೋದು ನಮಗೆ ಗೊತ್ತಿದೆ. ಈ ಬಾರಿ ಆ ಇತಿಹಾಸ ಮರುಕಳಿಸಲ್ಲ. ಬಿಜೆಪಿ ಅಲೆ ಡಿಕೆ ಬ್ರದರ್ಸ್ 2 ತಾಸಿನಲ್ಲಿ ಬದಲಿಸುತ್ತಾರೆ. ಅದಕ್ಕೆ ಈ ಬಾರಿ ನಾನು ಆ ಎರಡು ದಿನ ಮಲಗುವುದಿಲ್ಲ ಎಂದು JDS ಯುವ ಮುಖಂಡ ನಿಖಿಲ್ ಕುಮಾರಸ್ವಾಮಿಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ 2ರಿಂದ ಬೆಳಗ್ಗೆ 4ರವರೆಗೆ ನಾನು ನಿದ್ದೆ ಮಾಡಲ್ಲ. ಕಳೆದ ಬಾರಿ ಗಿಫ್ಟ್ ಹಂಚಿಕೆ ತರಹ ಮತ್ತೆ ಆಗೋದಕ್ಕೆ ನಾವ್ಯಾರು ಬಿಡಲ್ಲ. ಈ ಬಾರಿ ಅವರ ಸೋಲು ಖಚಿತ ಎಂದಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಒಂದಷ್ಟು ಜನ ಹೋಗುವುದು, ಮತ್ತೊಂದಷ್ಟು ಜನ ಬರುತ್ತಾರೆ. ಅದಕ್ಕೆ ಪ್ರಾಮುಖ್ಯತೆ ಕೊಡುವುದ ಬೇಡ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗಳು ಸಾಕಷ್ಟು ಬಲಿಷ್ಠವಾಗಿದೆ. ಎರಡು ಪಕ್ಷಗಳ ಕಾರ್ಯಕರ್ತರು ಪರಸ್ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಮತದಾರರು ತಿರ್ಮಾನ ಮಾಡಿದ್ದಾರೆ ಖಂಡಿತವಾಗಿಯೂ ಡಾ. ಸಿಎನ್ ಮಂಜುನಾಥ್ ಅವರಿಗೆ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲೇ ಹೈವೋಲ್ಟೇಜ್ ಪಡೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಗೆ ನಾಮಪತ್ತ ಸಲ್ಲಿಸುವ ಕೊನೆ ದಿನ ಆಗಿತ್ತು. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಡಾ.ಸಿ ಎನ್ ಮಂಜುನಾಥ್ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಸ್ಪರ್ಧೆಗೆ ಒಟ್ಟು 31 ನಾಮಿನೇಷನ್ ಸಲ್ಲಿಕೆ ಆಗಿದ್ದು ಇವತ್ತು ಎಲ್ಲಾ ನಾಮಿನೇಷನ್ ಗಳ ಪರಿಶೀಲನೆ ಆಗಲಿದೆ. ಅದ್ರಲ್ಲಿ ವಿಶೇಷ ಅಂದ್ರೆ ಐದು ಜನ ಅಭ್ಯರ್ಥಿ ಗಳು ಮಂಜುನಾಥ್ ಹೆಸರಲ್ಲಿದ್ದು, ಮೂವರು ಅಭ್ಯರ್ಥಿಗಳು ಸುರೇಶ್ ಹೆಸರಲ್ಲಿದ್ದಾರೆ.
ನಾಮಪತ್ರ ಸಲ್ಲಿಕೆ ಮೊದಲ ದಿನ 28 ನೇ ತಾರೀಕು ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಅದೇ ಹೆಸರಿನಲ್ಲಿ ಕರುನಾಡು ಪಾರ್ಟಿಯಿಂದ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರಿನ ಸುರೇಶ್ ಎಸ್. ಹಾಗೂ ಕನಕಪುರ ತಾಲ್ಲೂಕಿನ ಮರಳೆ ಗ್ರಾಮದ ಸುರೇಶ್ ಎಂ.ಎನ್ ಎಂಬುವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.