ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಬೇರೆ ಆಗಿ ಎರಡು ವರ್ಷಗಳು ಕಳೆದಿವೆ. ಇತ್ತೀಚೆಗೆ ಈ ದಂಪತಿ ಚೆನ್ನೈನ ಕೌಟುಂಬಿಕ ಕೋರ್ಟ್ಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಇವರು ಕಾನೂನಾತ್ಮಕವಾಗಿ ಬೇರೆ ಆಗಲು ಇನ್ನು ಹೆಚ್ಚು ಸಮಯ ಉಳಿದುಕೊಂಡಿಲ್ಲ. ಈ ಮಧ್ಯೆ ಮಕ್ಕಳ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆ ಮೂಡಿತ್ತು. ಈ ಜವಾಬ್ದಾರಿ ಐಶ್ವರ್ಯಾ ಪಾಲಾಗುವ ಸಾಧ್ಯತೆ ಇದೆ. ಅವರು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ತಮಗೇ ನೀಡಬೇಕು ಎಂದು ಕೋರಿದ್ದಾರೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ಪತಿ-ಪತ್ನಿಯರ ಮಧ್ಯೆ ಜಗಳ ಆಗುತ್ತದೆ. ಮಕ್ಕಳ ಹಕ್ಕನ್ನು ತಮಗೇ ನೀಡಬೇಕು ಎಂದು ಗಂಡ ಹಾಗೂ ಹೆಂಡತಿ ಇಬ್ಬರೂ ವಾದ ಮಂಡಿಸುತ್ತಾರೆ. ಆದರೆ, ಇಲ್ಲಿ ಹಾಗಿಲ್ಲ. ಇಬ್ಬರೂ ಶಾಂತ ರೀತಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದಾರೆ. ಐಶ್ವರ್ಯಾ ಮಕ್ಕಳ ಹಕ್ಕನ್ನು ತಮಗೇ ಕೇಳಿದ್ದು, ಇದಕ್ಕೆ ಧನುಷ್ ಯಾವುದೇ ವಿರೋಧ ತೋರಿಸಿಲ್ಲ.
ಐಶ್ವರ್ಯಾ ರಜನಿಕಾಂತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಐಶ್ವರ್ಯಾ ಅವರ ಮೊದಲ ನಿರ್ದೇಶನದ ಸಿನಿಮಾ ‘3’ಗೆ ಧನುಷ್ ಹೀರೋ ಆಗಿದ್ದರು. ಪತ್ನಿಯ ನಿರ್ದೇಶನದ ಸಿನಿಮಾಗೆ ಧನುಷ್ ಬೆಂಬಲವಾಗಿ ನಿಂತಿದ್ದರು. ಈ ದಂಪತಿಗೆ ಯಾತ್ರ ಹಾಗೂ ಲಿಂಗ ಹೆಸರಿನ ಮಕ್ಕಳಿದ್ದಾರೆ. ಮೊದಲ ಮಗ ಯಾತ್ರನಿಗೆ 18 ವರ್ಷ. ಮತ್ತೋರ್ವ ಮಗ ಲಿಂಗನಿಗೆ 14 ವರ್ಷ.
ಧನುಷ್ ಹಾಗೂ ಐಶ್ವರ್ಯಾ ಪ್ರೀತಿಸಿ ಮದುವೆ ಆದವರು. ಇವರು ಬೇರೆ ಆಗುತ್ತಿದ್ದಾರೆ ಎನ್ನುವ ವಿಚಾರ ಅನೇಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವರು ಬೇರೆ ಆಗಲು ಕಾರಣ ಏನು ಎಂಬುದು ಕೂಡ ಈವರೆಗೆ ಅಧಿಕೃತವಾಗಿಲ್ಲ. ಐಶ್ವರ್ಯಾ ಅವರು ಸಿನಿಮಾ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. ನಟ ಧನುಷ್ ಅವರು ಬೇರೆ ಬೇರೆ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.