ನಟ ಶ್ರೀಮುರಳಿ ಕಾಲಿಗೆ ಮತ್ತೆ ಗಾಯ ಆಗಿದೆ. ಅವರ ನಟನೆಯ ‘ಬಘೀರ’ ಸಿನಿಮಾ ಶೂಟಿಂಗ್ ವೇಳೆ ಈ ದುರ್ಘಟನೆ ನಡೆದಿದೆ. ಇದರಿಂದ ಅವರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ಶ್ರೀಮುರಳಿ ನಟನೆಯ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾದ ರಿಲೀಸ್ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. 2021ರ ‘ಮದಗಜ’ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.
‘ಬಘೀರ’ ಸಿನಿಮಾದ ಟೀಸರ್ ಈ ಮೊದಲು ರಿಲೀಸ್ ಆಗಿತ್ತು. ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಅನ್ನೋದು ಗೊತ್ತಾಗಿದೆ. ಡ್ಯೂಪ್ ಬಳಸದೆ ಸ್ವತಃ ಶ್ರೀಮುರಳಿ ಅವರೇ ಸ್ಟಂಟ್ಗಳನ್ನು ಮಾಡುತ್ತಿದ್ದಾರೆ. ಈ ಮೊದಲು ಈ ಚಿತ್ರದ ಶೂಟಿಂಗ್ನ ಫೈಟಿಂಗ್ ಸೀನ್ ವೇಳೆ ಅವರ ಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ ಅವರು ಸರ್ಜರಿಗೆ ಒಳಗಾಗಿ ಎರಡು ತಿಂಗಳು ರೆಸ್ಟ್ ಮಾಡಿದ್ದರು. ಇದೀಗ ಮತ್ತೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.
‘ಬಘೀರ’ ಚಿತ್ರಿಕರಣದ ಸಮಯದಲ್ಲಿ ಚಿತ್ರದಲ್ಲಿನ ಮುಖ್ಯವಾಗಿ ನಡೆಯುವ ಸನ್ನಿವೇಶದ ಬಹು ದೊಡ್ಡ ಸ್ಟಂಟ್ ಸೀನ್ ವೇಳೆ ಶ್ರೀಮುರಳಿ ಅವರಿಗೆ ಕಾಲಿಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಬಘೀರ’ ಸಿನಿಮಾಗೆ ಖ್ಯಾತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ ಹೂಡುತ್ತಿದೆ. ಸೂರಿ ಅವರು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು ಮೊದಲಾದವರು ನಟಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರಶಾಂತ್ ನೀಲ್ ಹಾಗೂ ಸೂರಿ ಕಥೆ ಬರೆದಿದ್ದಾರೆ.
‘ಮದಗಜ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರಿಕ್ಷೆ ಇದೆ. ಅಂದುಕೊಂಡ ಸಮಯದಲ್ಲಿ ಸಿನಿಮಾ ಕೆಲಸ ಪೂರ್ಣಗೊಳಿಸಲು ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿನಿಮಾದ ಕೆಲಸಗಳಿಗೆ ಚುರುಕು ಮುಟ್ಟಿಸಲಾಗಿದೆ. ಇದರ ಜೊತೆಗೆ ಶ್ರೀಮುರಳಿ ಅವರ ಕಾಲಿಗೆ ಪದೇ ಪದೇ ಗಾಯ ಆಗುತ್ತಿದೆ.