ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ । ಕೆ.ಆರ್.ನಗರಲ್ಲಿ ಜಂಟಿ ಸಮಾವೇಶ
ಪ್ರತಿನಿಧಿ ವರದಿ ಕೆ.ಆರ್.ನಗರ
ರಾಜ್ಯ ಸರ್ಕಾರ ದಿವಾಳಿಯಾಗಿ ಜನಹಿತ ಮರೆತಿದ್ದು, ಅಭಿವೃದ್ಧಿ ಕಾರ್ಯ ಹಾಗೂ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡುವ ಉದ್ದೇಶದಿಂದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ ಪಟ್ಟಣದ ಡಾ.ರಾಜ್ಕುಮಾರ್ ಬಾನಂಗಳದಲ್ಲಿ ಗುರುವಾರ ಸಂಜೆ ಆಯೋಜಿಸಲಾಗಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ವೀರಶೈವ ಸಮುದಾಯದವರು ಕುಮಾರಸ್ವಾಮಿ ಅಭ್ಯರ್ಥಿ ಎನ್ನದೇ ನಿಮ್ಮ ಯಡಿಯೂರಪ್ಪ ಎಂದು ತಿಳಿದು ಸಮುದಾಯದ ಒಂದು ಮತವು ಕೂಡ ಬೇರೆ ಪಕ್ಷಕ್ಕೆ ಹೋಗದಂತೆ ನಮ್ಮ ಅಭ್ಯರ್ಥಿ ಎಚ್ಡಿಕೆ ಗೆ ನೀಡಬೇಕು. ಬಿಜೆಪಿ ಕಾರ್ಯಕರ್ತರು ಮತಗಟ್ಟೆಗೆ ಹೋಗಿ ಕಮಲದ ಗುರುತು ಹುಡುಕಬೇಡಿ, ತೆನೆ ಹೊತ್ತ ರೈತ ಮಹಿಳೆಯ ಗುರುತಿಗೆ ಮತ ನೀಡಿ ಎಂದು ಕೋರಿದರು.
ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಹೆಸರು ಹೇಳುತ್ತೇವೆ. ಆದರೆ ಕಾಂಗ್ರೆಸ್ ನವರು ಪ್ರಧಾನಮಂತ್ರಿ ಅಭ್ಯರ್ಥಿಯ ಹೆಸರು ಹೇಳಲಿ. ಬಿಎಸ್ವೈ, ಮೋದಿ ಅವರ ಮುಂದೆ ಕಾಂಗ್ರೆಸ್ ಪಕ್ಷದಿಂದ ನಿಲ್ಲುವವರುಂಟೆ? ರಾಜ್ಯದ 28 ಕ್ಷೇತ್ರಗಳಲ್ಲೂ ನಾವು ಗೆಲ್ಲಲಿದ್ದು, ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ ಎಂದರು.
ಸಿಎಂ ವಿರುದ್ಧ ಕಿಡಿ:
ಅನೇಕ ಭಾಗ್ಯಗಳ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಬಿಜೆಪಿ ಸರ್ಕಾರ ತಂದ ಕಿಸಾನ್ ಸಮ್ಮಾನ್ ಯೋಜನೆ, ಭಾಗ್ಯಲಕ್ಷ್ಮಿ, ಸುವರ್ಣ ಭೂಮಿ, ಸುವರ್ಣ ಗ್ರಾಮದಂತಹ ಯೋಜನೆಗಳನ್ನು ಏಕೆ ನಿಲ್ಲಿಸಿದ್ದೀರಿ? ಪುಕ್ಕಟ್ಟೆ ಕಾರ್ಯಕ್ರಮಗಳಿಗಾಗಿ ಜನರಿಗೆ ಮೋಸ ವಂಚನೆ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕೆಲವು ಮಧ್ಯವರ್ತಿಗಳ ಹುಳಿಹಿಂಡಿದ ಕೆಲಸದಿಂದ ನಾನು ಯಡಿಯೂರಪ್ಪ ಅವರಿಗೆ ಕೊಟ್ಟ ಮಾತಿನಂತೆ ಅಧಿಕಾರ ನೀಡದೆ ಮಾತು ತಪ್ಪಿದ್ದು, ಮಾಡಿದ ತಪ್ಪಿಗೆ 16 ವರ್ಷಗಳಿಂದ ನೋವು ಅನುಭವಿಸುತ್ತಿದ್ದೇನೆ. ನಾವು ನಮ್ಮ ಸ್ವಾರ್ಥಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ, ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಕೊನೆಗಾಣಿಸಿ ರೈತರು, ಬಡವರ ಪರವಾಗಿ ಆಡಳಿತ ತರುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.
ನಾನು ತಾಯಂದಿರ ಕಣ್ಣು ಹೊರೆಸುವ ಉದ್ದೇಶದಿಂದ ಮಾಡಿದ ಸಾರಾಯಿ ನಿಷೇಧ, ಲಾಟರಿ ನಿಷೇಧ, ಗ್ರಾಮ ವಾಸ್ತವ್ಯ ಹಾಗೂ ಯಡಿಯೂರಪ್ಪ ಅವರು ತಂದ ಭಾಗ್ಯಲಕ್ಷ್ಮಿ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಸೇರಿದಂತೆ ಜನಪ್ರಿಯ ಅಭಿವೃದ್ಧಿ ಕಾರ್ಯಗಳು ನೀಡಿದಿರುವುದು ನಮ್ಮ ಅವಧಿಯಲ್ಲಿ ಮಾತ್ರ. 2016ರಲ್ಲಿ ನಾವು ಜತೆಯಾಗಿ ಉತ್ತಮ ಆಡಳಿತ ನೀಡಿದ್ದೇವೆ ಎಂದು ತಿಳಿಸಿದರು.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು, ಈ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದಾಗಿನಿಂದ ಇಲ್ಲಿಯವರೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚು ಮತ ನೀಡುತ್ತಾ ಬಂದಿದೆ. ಆದರೆ ಈ ಬಾರಿ ಸಾ.ರಾ.ಮಹೇಶ್ ಅವರ ಸೋಲಿನ ಮುಯ್ಯಿ ತೀರಿಸಿಕೊಳ್ಳಲು ಹಾಗೂ ಅವರ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳು, ಸಮಾಜ ಸೇವೆಯನ್ನು ಮತ್ತೆ ನೋಡಬೇಕು. ಅವರ ಕೈ ಬಲ ಬಡಿಸಬೇಕು ಎಂಬ ಉದ್ದೇಶದಿಂದ ಈ ಬಾರಿ ನನಗೆ ಹೆಚ್ಚಿನ ಮತ ನೀಡಿ ಎಂದು ಮನವಿ ಮಾಡಿದರು.
ಇದು ಪಿಟ್ ಪಾಕೆಟ್ ಸರ್ಕಾರ:
ಈ ಸರ್ಕಾರ ಬಂದ ಮೇಲೆ ಯಾವುದೇ ಹೊಸ ಕಾರ್ಯಕ್ರಮಗಳು ಇಲ್ಲ, ಒಂದು ಕಡೆ ಕೊಟ್ಟು ನಾಲ್ಕು ಕಡೆ ಕಿತ್ತುಕೊಳ್ಳುತ್ತಿದೆ. ಇದು ಪಿಟ್ ಪಾಕೆಟ್ ಸರ್ಕಾರ ಎಂದು ಕಿಡಿಕಾರಿದ ಎಚ್ಡಿಕೆ, ನುಡಿದಂತೆ ನಡೆಯುತ್ತೇವೆ ಎನ್ನುತ್ತಿರುವ ರಾಜ್ಯ ಸರ್ಕಾರ ಕೊಟ್ಟಿದ್ದನ್ನು ವಾಪಸ್ಸು ಕಿತ್ತುಕೊಳ್ಳುತ್ತಿದೆ. ಮೇಕೆದಾಟು ಸೇರಿದಂತೆ ರಾಜ್ಯದ ಜಲ ಸಮಸ್ಯೆ, ನೀರಾವರಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಶಾಶ್ವತ ಪರಿಹಾರ ಕಂಡುಕೊಳ್ಳಲು ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ನನಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿಕೊಡಬೇಕೆಂದು ಕೋರಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಈ ಚುನಾವಣೆ ಹಲವು ರಾಜಕೀಯ ದೃವೀಕರಣಕ್ಕೆ ಸಾಕ್ಷಿಯಾಗಿದ್ದು, ಯಡಿಯೂರಪ್ಪ, ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿದ್ದಾರೆ. ಹಾಗೇಯೆ ಸಾ.ರಾ.ಮಹೇಶ್ ನಾನು ಒಂದೇ ವೇದಿಕೆಯಲ್ಲಿ ಇದ್ದು, ನಮ್ಮೆಲ್ಲರ ಒಗ್ಗಟ್ಟಿನ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಪಣತೊಟ್ಟಿದ್ದೇವೆ. ಈ ಮಂಡ್ಯ ಕ್ಷೇತ್ರದಲ್ಲಿ ಹಣವಂತ ಕಾಂಗ್ರೆಸ್ ಅಭ್ಯರ್ಥಿ ಹೃದಯವಂತ ಎನ್ಡಿಎ ಅಭ್ಯರ್ಥಿ ನಡುವೆ ಚುನಾವಣೆ ನಡೆಯುತ್ತಿದ್ದು, ನೀವೆಲ್ಲ ಹೃದಯವಂತ ಎನ್ಡಿಎ ಅಭ್ಯರ್ಥಿ ಕುಮಾರಸ್ವಾಮಿಯವರಿಗೆ ಮತ ನೀಡಿದರೆ ನಮ್ಮ ಅಭ್ಯರ್ಥಿ ಕೇಂದ್ರದಲ್ಲಿ ಮಂತ್ರಿ ಆಗಿ ಅಭಿವೃದ್ಧಿ ಮಾಡುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೇ ಇನ್ನಷ್ಟು ದೊಡ್ಡ ಗುತ್ತಿಗೆದಾರ ಆಗುತ್ತಾರೆ ಎಂದು ಟೀಕಿಸಿದರು.
ಶಾಸಕ ಜಿ.ಟಿ.ದೇವೆಗೌಡ, ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಕೆ.ಮಹದೇವ್, ಕೆ.ಟಿ.ಶ್ರೀಕಂಠೇಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯ ಅಮಿತ್ ದೇವರಹಟ್ಟಿ, ಮುಖಂಡರಾದ ಡಾ.ಮಹಬೂಬ್ಖಾನ್, ಮಿರ್ಲೆ ಶ್ರೀನಿವಾಸಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರಕುಮಾರ್, ವಕ್ತಾರ ಕೆ.ಎಲ್.ರಮೇಶ್ ಇನ್ನಿತರರು ಇದ್ದರು.
ಕೆ.ಆರ್.ನಗರದಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಶಾಸಕ ಜಿ.ಟಿ.ದೇವೆಗೌಡ, ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಕೆ.ಮಹದೇವ್, ಕೆ.ಟಿ.ಶ್ರೀಕಂಠೇಗೌಡ, ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಇನ್ನಿತರರು ಇದ್ದರು.
18 ಕೆಆರ್ಎನ್-2,3:- ಕೆ.ಆರ್.ನಗರದಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಜಿ.ಟಿ.ದೇವೆಗೌಡ, ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಕೆ.ಮಹದೇವ್, ಕೆ.ಟಿ.ಶ್ರೀಕಂಠೇಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್ ಇನ್ನಿತರರು ಇದ್ದರು.