ಮೈಸೂರು, ಜುಲೈ 22, 2026 : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯು ಮೈಸೂರಿನಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಜೂನಿಯರ್ ಕಾಲೇಜು ಆವರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಸಾರ್ವಜನಿಕವಾಗಿಯೇ ತೀವ್ರ ಮಾತಿನ ಚಕಮಕಿ ಹಾಗೂ ವಾಗ್ವಾದ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಬಿಜೆಪಿ ನಾಯಕರ ಗಂಭೀರ ಆರೋಪ ಮತ್ತು ಆಕ್ರೋಶ:

ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆತಂದು ರಾಜಕೀಯ ಪ್ರತಿಭಟನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡ ಹಾಗೂ ಬಿಜೆಪಿ ನಾಯಕರು ಏಕಕಾಲಕ್ಕೆ ಭೇಟಿ ನೀಡಿದಾಗ ವಾತಾವರಣ ಕಾವೇರಿತು. ಕಾಲೇಜು ಆಡಳಿತ ಮಂಡಳಿಯ ನಡೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಪ್ರಾಂಶುಪಾಲರ ಕಚೇರಿಯ ಮುಂಭಾಗದಲ್ಲಿ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಹಾಗೂ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಅವರ ನೇತೃತ್ವದಲ್ಲಿ, ಮೃತ ವಿದ್ಯಾರ್ಥಿಗಳ ಫ್ಲೆಕ್ಸ್ ಹಾಗೂ ಕಾಲೇಜು ಆವರಣದಲ್ಲಿದ್ದ ಬ್ಯಾನರ್ಗಳನ್ನು ತೆರವುಗೊಳಿಸುವಂತೆ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಯಿತು. ಅಂತಿಮವಾಗಿ ಬಿಜೆಪಿ ಕಾರ್ಯಕರ್ತರೇ ಮುಂಚೂಣಿಯಲ್ಲಿದ್ದು ಕಾಲೇಜಿನಲ್ಲಿದ್ದ ಬ್ಯಾನರ್ಗಳನ್ನು ತೆರವುಗೊಳಿಸಿದರು.
ಶಾಸಕ ಹರೀಶ್ ಗೌಡ ತಿರುಗೇಟು:
ಬಿಜೆಪಿ ನಾಯಕರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳುಹಾಕಿದ ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆಯೇ ಹೊರತು ಯಾವುದೇ ರಾಜಕೀಯ ಪ್ರೇರಿತ ಕಾರ್ಯಕ್ರಮ ಇದಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲಿ ರಾಹುಲ್ ಗಾಂಧಿಯವರ ಫೋಟೋ ಬಳಸಿಲ್ಲ ಹಾಗೂ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳು ಕೇವಲ ಸುಳ್ಳು ಎಂದು ಅವರು ತಿರುಗೇಟು ನೀಡಿದರು.
ಪ್ರಾಂಶುಪಾಲರ ಸ್ಪಷ್ಟನೆ:

ಘಟನೆ ಕುರಿತು ಮಹಾರಾಣಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಪ್ರತಿಕ್ರಿಯಿಸಿ, ನೀಟ್ ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕಾರ್ಯಕ್ರಮ ಇದಾಗಿದ್ದು, ಸ್ಥಳೀಯ ಶಾಸಕರು ಉಪನಿರ್ದೇಶಕರಿಗೆ ನೀಡಿದ್ದ ಪತ್ರದ ಆಧಾರದಲ್ಲಿ ಮೇಲಧಿಕಾರಿಗಳ ಆದೇಶ ಪಾಲಿಸಿ ಅನುಮತಿ ನೀಡಿದ್ದಾಗಿ ತಿಳಿಸಿದರು. ಬ್ಯಾನರ್ನಲ್ಲಿ ರಾಹುಲ್ ಗಾಂಧಿಯವರ ಫೋಟೋ ಇರುವ ವಿಷಯ ತಮ್ಮ ಗಮನಕ್ಕೆ ಬಂದಿರಲಿಲ್ಲವೆಂದು ತಿಳಿಸಿದ ಅವರು, ತಕ್ಷಣವೇ ಕಾಲೇಜು ಆವರಣದಲ್ಲಿದ್ದ ಬ್ಯಾನರ್ಗಳನ್ನು ತೆಗೆಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
