ಮೈಸೂರು, ಡಿಸೆಂಬರ್ 1, 2025 : ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ನಡೆಯುತ್ತಿರುವ ‘ಬ್ರೇಕ್ ಫಾಸ್ಟ್ ಮೀಟಿಂಗ್’ಗಳು ಮತ್ತು ಭಿನ್ನಮತದ ಚರ್ಚೆಗಳ ಕುರಿತು ಮೈಸೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದ್ದಾರೆ. ಸಭೆಗಳನ್ನು ರಾಜಕೀಯ ಸಭೆಗಳೆಂದು ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಅವರು ಮಾಧ್ಯಮಗಳಿಗೆ ಮನವಿ ಮಾಡಿದರು.
ಬ್ರೇಕ್ ಫಾಸ್ಟ್ ಮೀಟಿಂಗ್ಗಳಿಗೆ ಬೇರೆ ಅರ್ಥಗಳನ್ನು ಕಲ್ಪಿಸುವುದು ಬೇಡ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ಗಳಲ್ಲಿ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡುತ್ತಾರೆ. ಅದನ್ನು ಪೊಲಿಟಿಕಲ್ ಬ್ರೇಕ್ ಫಾಸ್ಟ್ ಎಂದು ಹೇಳುವುದು ಬೇಡ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಕಾಂಗ್ರೆಸ್ನಲ್ಲಿ ಭಿನ್ನಮತದ ಚರ್ಚೆಗಳು ನಡೆಯುತ್ತಿವೆ ಎಂಬ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಭಿನ್ನಮತ ಇಲ್ಲ ಎಂದು ದೃಢಪಡಿಸಿದರು. ನಮ್ಮಲ್ಲಿ ಯಾವುದೇ ಭಿನ್ನಮತಗಳು ಇಲ್ಲ. ಸುಮ್ಮನೆ ಅದು ಹೊರಗಡೆ ಚರ್ಚೆಯಾಗುತ್ತಿದೆ. ಪಕ್ಷದ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಇಂತಹ ಚರ್ಚೆಗಳು ನಡೆಯಬಾರದು. ಆದರೆ ಈ ಎಲ್ಲಾ ಚರ್ಚೆಗಳು ನಡೆದು ಬಿಟ್ಟಿವೆ. ಎಲ್ಲವೂ ಈಗ ಬಗೆ ಹರಿದಿದೆ.
ಹೈಕಮಾಂಡ್ ನಿರ್ಧಾರವೇ ಅಂತಿಮ
ಕೆಲವು ಸಮುದಾಯದ ಶಾಸಕರು ತಮ್ಮ ನಾಯಕರ ಪರವಾಗಿ ಧ್ವನಿ ಎತ್ತುತ್ತಿರುವ ಕುರಿತು ಪ್ರಸ್ತಾಪಿಸಿದ ಅವರು, ಅದು ಅವರ ವೈಯಕ್ತಿಕ ಸ್ವಾತಂತ್ರ್ಯ ಎಂದರು. ಕೆಲವು ಸಮುದಾಯಗಳ ಶಾಸಕರು ತಮ್ಮ ನಾಯಕರ ಪರ ಧ್ವನಿ ಎತ್ತಿದ್ದಾರೆ. ಅದು ಅವರ ಸ್ವತಂತ್ರ ಎಂದರು. ಅಂತಿಮವಾಗಿ ಎಲ್ಲವನ್ನೂ ನಿರ್ಧಾರ ಮಾಡುವುದು ನಮ್ಮ ಹೈಕಮಾಂಡ್. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದು ಸಿಎಂ, ಡಿಸಿಎಂ ಅವರೇ ಹೇಳಿದ್ದಾರೆ. ಅಲ್ಲಿಗೆ ಎಲ್ಲಾ ಚರ್ಚೆಗಳು ಮುಗಿದಿವೆ ಎಂದು ಸಚಿವ ಗುಂಡೂರಾವ್ ತಿಳಿಸಿದರು. ಅಲ್ಲದೆ, ಸಿಎಂ ಮತ್ತು ಡಿಸಿಎಂ ಒಂದಾಗಿಯೇ ಸರ್ಕಾರ ನಡೆಸುತ್ತಿದ್ದಾರೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದೂ ಅವರು ಸ್ಪಷ್ಟಪಡಿಸಿದರು.
