ಶಿವಮೊಗ್ಗ, ಡಿಸೆಂಬರ್ 5, 2025 : ಕನ್ನಡ ಚಿತ್ರರಂಗದಲ್ಲಿ ದುಡಿಯುವ ಕಲಾವಿದರ ದುಸ್ಥಿತಿಗೆ ‘ಪಾತ್ರಧಾರಿ’ ಚಲನಚಿತ್ರದ ನಿರ್ದೇಶಕ ಸಂಗೀತ್ ಸಾಗರ್ ಅವರ ಅಂತ್ಯವೇ ಜ್ವಲಂತ ಸಾಕ್ಷಿಯಾಗಿದೆ. ಬದುಕಿದ್ದಾಗ ನೆಮ್ಮದಿಯನ್ನು ಕಾಣದ ಈ ಪ್ರತಿಭಾವಂತ, ಸಾವಿನ ನಂತರವೂ ಸುಖಾಂತ್ಯ ಕಾಣದೆ, ಅವರ ಪಾರ್ಥಿವ ಶರೀರವನ್ನು ಬಿಡಿಸಿಕೊಳ್ಳಲು ಚಿತ್ರತಂಡವು ಆಸ್ಪತ್ರೆಯ ಎದುರು ನಿಂತು ಪರದಾಡಬೇಕಾಯಿತು.
ಚಿತ್ರೀಕರಣದ ನಡುವೆಯೇ ಎದುರಾದ ದುರಂತ

ಕಳೆದ ಎರಡು ತಿಂಗಳಿನಿಂದ ಸಂಗೀತ್ ಸಾಗರ್ ಅವರ ತಂಡವು ತೀರ್ಥಹಳ್ಳಿ ಮತ್ತು ಕೊಪ್ಪ ತಾಲೂಕಿನ ವಿವಿಧ ಸ್ಥಳಗಳಲ್ಲಿ ‘ಪಾತ್ರಧಾರಿ’ ಚಿತ್ರದ ಚಿತ್ರೀಕರಣವನ್ನು ನಡೆಸುತ್ತಿತ್ತು. ನಾಲ್ಕೈದು ಯುವಕರು ಸೇರಿ ನಿರ್ಮಿಸುತ್ತಿದ್ದ ಇದು ಕಡಿಮೆ ಬಜೆಟ್ನ (ಲೋ ಬಜೆಟ್) ಸಿನಿಮಾವಾಗಿದೆ.
ಡಿ. 3, 2025 ರಂದು ಹರಿಹರಪುರದಲ್ಲಿ ಹಾಸ್ಯ ಕಲಾವಿದ ಸಂಜು ಬಸಯ್ಯರಿಗೆ ಆಕ್ಷನ್ ಕಟ್ ಹೇಳುತ್ತಿದ್ದಂತೆಯೇ, ನಿರ್ದೇಶಕ ಸಂಗೀತ್ ಸಾಗರ್ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಕೊಪ್ಪ ತಾಲೂಕಿನ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ತಕ್ಷಣಕ್ಕೆ ಆಂಜಿಯೋಗ್ರಾಂ ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಡಿ. 4, 2025ರ ಬೆಳಿಗ್ಗೆ ಸಿನಿಮಾದ ಕೊನೆಯ ಶಾಟ್ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ, ಸಿನಿಮಾ ಮುಗಿಯುವ ಮುನ್ನವೇ ಅವರ ಬಾಳ ಪಯಣ ಮುಗಿದುಹೋಯಿತು.
ಹಣಕ್ಕಾಗಿ ಅರ್ಧ ದಿನ ಹೆಣ ಕಾಯ್ದಿರಿಸಿದ ಆಸ್ಪತ್ರೆ!
ಸಂಗೀತ್ ಸಾಗರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳ ಚಿಕಿತ್ಸೆಗೆ ₹2,32,000 (ಎರಡು ಲಕ್ಷದ ಮೂವತ್ತೆರೆಡು ಸಾವಿರ) ಹಣವನ್ನು ಭರಿಸುವಂತೆ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಕಡಿಮೆ ಖರ್ಚಿನ ಸಿನಿಮಾ ಮಾಡುತ್ತಿದ್ದ ಚಿತ್ರತಂಡಕ್ಕೆ ತಕ್ಷಣಕ್ಕೆ ಎರಡುವರೆ ಲಕ್ಷ ರೂಪಾಯಿ ಹೊಂದಿಸಲು ಸಾಧ್ಯವಾಗಲಿಲ್ಲ.
ಚಿತ್ರತಂಡ ಮತ್ತು ನಿರ್ಮಾಪಕರ ಮನವಿಯ ಮೇರೆಗೆ ಆಸ್ಪತ್ರೆಯವರು ₹1 ಲಕ್ಷ ಕಡಿಮೆ ಮಾಡಿದರು. ಆದರೆ, ಉಳಿದ ಹಣವನ್ನೂ ಭರಿಸಲು ಸಾಧ್ಯವಾಗದೆ ತಂಡ ಪರದಾಡಿತು. ಸ್ನೇಹಿತರು ಮತ್ತು ಸಂಬಂಧಿಕರ ಬಳಿ ಹಣ ಕೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲಿದ್ದ ಸಹ ಕಲಾವಿದರೇ ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ಹಣವನ್ನು ಹೊಂದಿಸಿದರೂ, ಅದು ಕೂಡ ಸಾಲದೇ ಹೋದಾಗ ಹತಾಶರಾಗಿ ಆಕಾಶದತ್ತ ಮುಖ ಮಾಡುವ ಪರಿಸ್ಥಿತಿ ಬಂದಿತ್ತು.
ಚಿಕಿತ್ಸಾ ಶುಲ್ಕದ ಬಗ್ಗೆ ಚಿತ್ರತಂಡದ ಆಕ್ಷೇಪ
ಕೊಪ್ಪದಿಂದ ಶಿವಮೊಗ್ಗದ ಆಸ್ಪತ್ರೆಗೆ ಕರೆತಂದ ಕೆಲವೇ ನಿಮಿಷಗಳಲ್ಲಿ ಸಂಗೀತ್ ಸಾಗರ್ ಸಾವನ್ನಪ್ಪಿದ್ದಾರೆ. ಆದರೆ ಆಸ್ಪತ್ರೆ ಆಡಳಿತ ಮಂಡಳಿ ವಿಪರೀತ ಶುಲ್ಕ ಕೇಳುತ್ತಿರುವುದಕ್ಕೆ ಚಿತ್ರತಂಡ ಆಕ್ಷೇಪ ವ್ಯಕ್ತಪಡಿಸಿದೆ.
“ಆಸ್ಪತ್ರೆಗೆ ಸೇರಿದ ತಕ್ಷಣ ಆಂಜಿಯೋಗ್ರಾಫ್ ಮಾಡಿದ್ದಾಗಿ ಹೇಳುತ್ತಿದ್ದಾರೆ. ಆದರೆ, ಹತ್ತು ನಿಮಿಷವೂ ಆಗಿಲ್ಲ. ಇಷ್ಟು ಕಡಿಮೆ ಅವಧಿಯಲ್ಲಿ ಆಂಜಿಯೋಗ್ರಾಮ್ ಮಾಡಲು ಸಾಧ್ಯವೇ? ಬೇಕಿದ್ದರೆ ಸಿಸಿ ಟಿವಿ ಫೂಟೇಜ್ ಇದೆ, ಅದನ್ನು ಪರಿಶೀಲಿಸಿ ನೋಡಿ. ನಮಗೆ ಆಸ್ಪತ್ರೆಯವರು ₹1.5 ಲಕ್ಷ (ಒಂದುವರೆ ಲಕ್ಷ) ಹಣ ನೀಡುವಂತೆ ಹೇಳುತ್ತಿದ್ದಾರೆ. ನಮ್ಮ ತಂಡದವರು ₹50 ಸಾವಿರ ನೀಡಲು ಸಿದ್ಧರಿದ್ದೇವೆ. ಮಾನವೀಯ ನೆಲೆಯಲ್ಲಿ ಆಸ್ಪತ್ರೆಯವರು ಅವಕಾಶ ಮಾಡಿಕೊಡಬೇಕು” ಎಂದು ಚಿತ್ರತಂಡ ಮನವಿ ಮಾಡಿದೆ.
ಸಿನಿಮಾವೇ ಬದುಕಾಗಿಸಿಕೊಂಡಿದ್ದ ಸಾಗರ್
ಸಂಗೀತ್ ಸಾಗರ್ ಅವರು ಮೂಲತಃ ಸಕಲೇಶಪುರದವರಾಗಿದ್ದು, ಮದುವೆಯಾಗಿ 23 ವರ್ಷಗಳಾಗಿತ್ತು. ಸಂಗೀತ ನಿರ್ದೇಶಕರಾಗಿ ವೃತ್ತಿ ಆರಂಭಿಸಿ ನಂತರದಲ್ಲಿ ಸಿನಿಮಾ ನಿರ್ದೇಶಕರಾದ ಇವರು, ಏಳಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು. ‘ಪಾತ್ರಧಾರಿ’ ಚಿತ್ರಕ್ಕೂ ಅವರೇ ಸಂಗೀತ ನೀಡಿದ್ದರು. ಒಬ್ಬ ಕಲಾವಿದನ ಸಾವಿಗೆ ಆಸ್ಪತ್ರೆಯವರು ತಕ್ಷಣಕ್ಕೆ ಸ್ಪಂದಿಸಬಹುದಿತ್ತು, ಆದರೆ ಅರ್ಧ ದಿನ ಹಣಕ್ಕಾಗಿ ಹೆಣವನ್ನು ಕಾಯ್ದಿರಿಸಿಕೊಂಡಿದ್ದು ಯಾವ ನ್ಯಾಯ ಎಂಬ ಪ್ರಶ್ನೆ ಈಗ ಸಹಜವಾಗಿ ಮೂಡಿದೆ.
