ಅಯೋಧ್ಯೆ, ಜ 16: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮೀಪಿಸುತ್ತಿದ್ದಂತೆಯೇ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ರಾಮಲಲ್ಲಾನ ಗರ್ಭ ಗೃಹದ ಚಿನ್ನದ ಬಾಗಿಲುಗಳ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ. ಜನವರಿ 22 ರಂದು ಪವಿತ್ರ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಸಮಾರಂಭದಲ್ಲಿ ಸುಮಾರು 7,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
‘ಭಗವಾನ್ ಶ್ರೀ ರಾಮಲಲ್ಲಾ ಸರ್ಕಾರ್ ಅವರ ಗರ್ಭಗೃಹದ ಚಿನ್ನದ ಬಾಗಿಲುಗಳ ಸ್ಥಾಪನೆಯೊಂದಿಗೆ, ನೆಲ ಮಹಡಿಯಎಲ್ಲಾ ಚಿನ್ನದ ಬಾಗಿಲುಗಳ ಸ್ಥಾಪನೆಯ ಕಾರ್ಯವು ಪೂರ್ಣಗೊಂಡಿದೆ’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದೆ.
ಇತ್ತೀಚೆಗೆ, ದೇವಾಲಯದ ಚಿನ್ನ ಲೇಪಿತ ಬಾಗಿಲುಗಳ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ರಾಮನ ವಿಗ್ರಹವಿರುವ ದೇವಾಲಯದ ಗರ್ಭಗುಡಿ ಅಥವಾ ‘ಗರ್ಭ ಗೃಹ’ದ ಭಾರವಾದ ಚಿನ್ನ ಲೇಪಿತ ಬಾಗಿಲುಗಳ ಚಿತ್ರವನ್ನು ಟ್ರಸ್ಟ್ ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿತ್ತು. ಎಲ್ಲಾ ಬಾಗಿಲುಗಳನ್ನು ಹೈದರಾಬಾದ್ ಮೂಲದ ಕುಶಲಕರ್ಮಿಗಳು ಮಾಡಿದ್ದಾರೆ.
ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರ ಸಂಕೀರ್ಣವು 380 ಅಡಿ ಉದ್ದ, 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿರುವುದು ಗಮನಾರ್ಹ. ಇವುಗಳಲ್ಲದೆ ರಾಮ ಮಂದಿರದ ಪ್ರತಿ ಮಹಡಿ 20 ಅಡಿ ಎತ್ತರ ಇರಲಿದೆ. ಒಟ್ಟಾರೆಯಾಗಿ, ದೇವಾಲಯವು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿರುತ್ತದೆ.
ದೇವಸ್ಥಾನದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ರಾಮಲಲ್ಲಾನ ಹೊಸ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ ಎಂಬ ಅಧಿಕೃತ ಘೋಷಣೆ ಮಾಡಿದ್ದರು. ಪ್ರಸ್ತುತ ರಾಮಲಲ್ಲಾನ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಗುವುದು ಎಂದು ಅವರು ಹೇಳಿದ್ದಾರೆ.