ಮೈಸೂರು, ಫೆಬ್ರವರಿ 2, 2026 : ಕಡಿಮೆ ಬಡ್ಡಿ ದರದಲ್ಲಿ ಅತಿ ಹೆಚ್ಚು ಚಿನ್ನದ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಸ್ಟಾರ್ ಗೋಲ್ಡ್ ಕಂಪನಿಯ ಮಾಲೀಕ ಯೋಗೀಶ್ ಎಂಬಾತನನ್ನು ವಿಜಯನಗರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಮೈಸೂರಿನ ವಿಜಯನಗರದ ತ್ರಿನೇತ್ರ ಸರ್ಕಲ್ ಬಳಿ ಸ್ಟಾರ್ ಗೋಲ್ಡ್ ಹೆಸರಿನ ಕಂಪನಿಯನ್ನು ನಡೆಸುತ್ತಿದ್ದ ಈತ, ಸಾರ್ವಜನಿಕರಿಗೆ ಆಕರ್ಷಕ ಆಮಿಷಗಳನ್ನು ಒಡ್ಡುವ ಮೂಲಕ ಅವರ ಚಿನ್ನಾಭರಣಗಳನ್ನು ಅಡಮಾನ ಇರಿಸಿಕೊಳ್ಳುತ್ತಿದ್ದನು.ಆರೋಪಿಯು ತನ್ನ ಬಳಿ ಚಿನ್ನ ಅಡಮಾನ ಇಟ್ಟಿದ್ದ ಸುಮಾರು 15 ಮಂದಿ ಗ್ರಾಹಕರಿಗೆ ತಿಳಿಯದಂತೆ, ಅವರ ಒಟ್ಟು 850 ಗ್ರಾಂ ತೂಕದ ಚಿನ್ನಾಭರಣಗಳನ್ನು ತೆಗೆದುಕೊಂಡು ರಾತ್ರೋರಾತ್ರಿ ನಾಪತ್ತೆಯಾಗಿದ್ದನು.
ಈ ಸಂಬಂಧ 2025ರ ನವೆಂಬರ್ ತಿಂಗಳಿನಲ್ಲಿ ಸಂತ್ರಸ್ತರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ ಎರಡೂವರೆ ತಿಂಗಳಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಈ ಭೂಪನನ್ನು ಸುದೀರ್ಘ ಕಾರ್ಯಾಚರಣೆಯ ನಂತರ ಈಗ ಸೆರೆಹಿಡಿಯಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
