ಮೈಸೂರು : ಗನ್ ಹೌಸ್ ವೃತ್ತದಲ್ಲಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸರ್ವ ಜನಾಂಗದ ಸಮಿತಿ ಸಂಚಾಲಕ ಎಚ್.ಎಂ.ಟಿ. ಲಿಂಗರಾಜು ತಿಳಿಸಿದರು.
ಸುಪ್ರಿಂಕೋರ್ಟ್ ನಿಂದ ತಡೆಯಾಜ್ಞೆ ಸಿಕ್ಕಿರುವುದು ಸರ್ವ ಜನಾಂಗದ ಸಮಿತಿ ನಡೆಸುತ್ತಿದ್ದ ಹೋರಾಟಕ್ಕೆ ಸಂದ ಜಯವಾಗಿದೆ. ಸುಪ್ರಿಂಕೋರ್ಟ್ ತಡೆಯಾಜ್ಞೆ ಆದೇಶದ ಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದು, ಕಾಮಗಾರಿ ನಡೆಸದಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ವೃತ್ತದಲ್ಲಿ ಪ್ರತಿಮೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ವಕೀಲ ಸುಬ್ರಹ್ಮಣ್ಯ ಅವರು ತಮ್ಮ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರತಿಮೆ ನಿರ್ಮಾಣ ಸಂಬಂಧ ಜಿಲ್ಲಾ ಕಮಿಟಿಯಲ್ಲಿರುವ ಜಿಲ್ಲಾಧಿಕಾರಿ ಸೇರಿದಂತೆ ಇತರೇ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿವರಣೆ ನೀಡುವಂತೆ ನಿರ್ದೇಶನ ನೀಡಿತ್ತು. ಆದರೆ, ಕಾಮಗಾರಿ ಸ್ಥಗಿತಕ್ಕೆ ತಡೆಯಾಜ್ಞೆ ನೀಡದ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಅವರು ಸುಪ್ರಿಂಕೋರ್ಟ್ ಗೆ ಜ.8 ರಂದು ತಮ್ಮ ವಕೀಲರಾದ ದಾಮಾ ಶೇಷಾದ್ರಿ ನಾಯ್ದು ಅವರ ಮೂಲಕ ಸ್ಪೇಷಲ್ ಲೀವ್ ಪಿಟಿಷನ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಶುಕ್ರವಾರ ಪ್ರತಿಮೆ ಅನಾವರಣಕ್ಕೆ ತಡೆಯಾಜ್ಞೆ ನೀಡಿದೆ ಎಂದು ಅವರು ವಿವರಿಸಿದರು.