ಮೈಸೂರು, ನವೆಂಬರ್ 5, 2025 : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಸಂಘಟನೆ ಉತ್ತಮವಾಗಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರುತ್ತಾರೆ. ಈ ನಿಟ್ಟಿನಲ್ಲಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಮಾಜಿ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ಹೇಳಿದರು.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅಭಿಮಾನಿ ಬಳಗದ ವತಿಯಿಂದ ಬಿವೈ ವಿಜಯೇಂದ್ರರವರ ಹುಟ್ಟುಹಬ್ಬದ ಅಂಗವಾಗಿ
50ಕ್ಕೂ ಹೆಚ್ಚು ಕಾರ್ಯಕರ್ತರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಗ್ರಾಮಾಂತರ ಮಾಜಿ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ಸ್ವತಹ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಮಾತಿನಿಂದ ಜನರನ್ನು ಹಾಗೂ ಕಾರ್ಯಕರ್ತರನ್ನು ಸೆಳೆಯುವ ಛಾಪು ರೂಪಿಸಿಕೊಂಡಿದ್ದಾರೆ. ಇವರ ಅನುಭವ, ಸಂಘಟನೆ, ರಾಜಕಾರಣ ಮಾಡುವ ಕಾರ್ಯತಂತ್ರದಿಂದ ಉತ್ತಮ ಪದವಿಯ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವಿಲ್ಲ. ವಿಜಯೇಂದ್ರ ಅವರ ಸಂಘಟನೆಯಿಂದಾಗಿ ಮುಂಬರುವಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತದೆ. ನಿಸ್ವಾರ್ಥದಿಂದ ಜನರ ಸೇವೆ ಮಾಡುತ್ತಿರುವ ವಿಜಯೇಂದ್ರ ಅವರಿಗೆ ಚಾಮುಂಡೇಶ್ವರಿ ತಾಯಿ ಆರೋಗ್ಯ ಹಾಗೂ ಜನರ ಸೇವೆ ಕೈಗೊಳ್ಳಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಶುಭ ಕೋರಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತಿತ್ತು. ಈಗ ಪುನರಾವರ್ತಿಯಂತೆ ವಿಜಯೇಂದ್ರ ಗುಡುಗಿದರೆ ವಿಧಾನಸೌಧ ನಡುಗುತ್ತದೆ. ಆಡಳಿತ ಪಕ್ಷ ಕಾಂಗ್ರೆಸ್ ಮಾಡುವ ಪ್ರತಿಯೊಂದು ತಪ್ಪನ್ನು ನಮ್ಮ ರಾಜ್ಯಾಧ್ಯಕ್ಷರು ಎತ್ತಿ ಹಿಡಿದು ನಾಡಿನ ಜನತೆಗೆ ತೋರಿಸುವ ಮೂಲಕ ಪ್ರಶ್ನಿಸುತ್ತಿದ್ದಾರೆ. ಜನತೆಗೆ ಯಾವುದೇ ರೀತಿ ಮೋಸ ಆಗದಂತೆ ಕಾಂಗ್ರೆಸ್ ಸರ್ಕಾರದ ಕಿವಿ ಹಿಂಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಒಗ್ಗಟ್ಟಿಲ್ಲದೆ ಅಧಿಕಾರಕ್ಕೆ ಕಿತ್ತಾಡುತ್ತಿದ್ದು, ಸರ್ಕಾರ ಯಾವ ಸಮಯದಲ್ಲಾದರೂ ಬೀಳಬಹುದು. ಆಗ ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಆಗುವುದು ಶತಸಿದ್ಧ ಎಂದರು.
ಇದೇ ಸಂದರ್ಭದಲ್ಲಿ ಮಾಜಿನಗರ ಪಾಲಿಕಾ ಸದಸ್ಯರಾದ ಜಗದೀಶ್, ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಬಿಜೆಪಿ ಮುಖಂಡರಾದ ವಕೀಲ ಶಿವರಾಜ್, ಕುಮಾರಸ್ವಾಮಿ, ಹರೀಶ್ ಹಾಗೂ ಮತ್ತಿತರರು ಹಾಜರಿದ್ದರು.
