ಬೆಂಗಳೂರು : ಮಂಡ್ಯದ ಕೆರಗೋಡುನಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದು ಬಹಳ ಸೂಕ್ಷ್ಮ ವಿಷಯವಾಗಿತ್ತು ಆದರೆ ಅದನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ರಾಜ್ಯಸರ್ಕಾರ ಪ್ರಮಾದವೆಸಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಈ ಕುರಿತು ಮಾತನಾಡಿದ ಸುಮಲತಾ, ಸರ್ಕಾರ ಕಟ್ಟುನಿಟ್ಟಾಗಿ ಕಾನೂನನ್ನು ಜಾರಿಗೊಳಿಸುತ್ತಿರುವ ಬಗ್ಗೆ ಹೇಳಿಕೊಳ್ಳುತ್ತ್ತಿರುವುದಾದರೆ, ಯಾರ ಭಾವನೆಗಗಳಿಗೂ ಧಕ್ಕೆ ಉಂಟು ಮಾಡದ ಹನುಮ ಧ್ವಜ ಮಾತ್ರ ಅದರ ಕಣ್ಣಿಗೆ ಬಿತ್ತೇ? ಮಂಡ್ಯ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ, ಅನೇಕ ಕೆರೆಗಳ ಒತ್ತುವರಿಯಾಗಿದೆ, ಇಂಥ ಪ್ರಕರಣಗಳಲ್ಲಿ ಕಾನೂನು ಯಾಕೆ ಸುಮ್ಮನಿದೆ ಎಂದು ಸುಮಮತಾ ಖಾರವಾಗಿ ಪ್ರಶ್ನಿಸಿದರು. ಹನುಮ ಧ್ವಜ ಹಾರಿಸಿದ್ದು ಒಂದು ಸಾರ್ವಜನಿಕ ಸ್ಥಳದಲ್ಲೇ ಹೊರತು ಬೇರೆ ಧರ್ಮದ ಪ್ರಾರ್ಥನಾ ಮಂದಿರದ ಮೇಲಲ್ಲ. ಹಾಗಾಗಿ, ಗ್ರಾಮದ ಜನರೊಂದಿಗೆ ಮಾತಾಡಿ ವಿಷಯವನ್ನು ಸುಲಭವಾಗಿ, ಶಾಂತಿಯುತವಾಗಿ ಬಗೆಹರಿಸಬಹುದಿತ್ತು. ಅದರೆ 6 ದಿನಗಳ ನಂತರ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಸರ್ಕಾರ ಪ್ರಕರಣಕ್ಕೆ ವಿನಾಕಾರಣ ರಾಜಕೀಯ ಬಣ್ಣವನ್ನು ಲೇಪಿಸಿತು ಎಂದು ಸುಮಲತಾ ಹೇಳಿದರು.