ಹಾಸನ : ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಮುಂದಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಅರಸೀಕೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅರಸೀಕೆರೆ ತಾಲೂಕಿನ ತೂಬಿನಕೆರೆ ಬೋವಿ ಕಾಲೋನಿ ನಿವಾಸಿ ಜಯಪ್ಪ (34) ಕೊಲೆಯಾದ ವ್ಯಕ್ತಿ. ಇದೆ ತಾಲೂಕಿನ ಕಾಳೆನಹಳ್ಳಿ ಹಟ್ಟಿಯ ಅಣ್ಣಯ್ಯ (24) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. 2021ರಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿದ ಪ್ರಕರಣದಲ್ಲಿ ಅಣ್ಣಯ್ಯ ಜೈಲು ಸೇರಿದ್ದನು. 2022ರ ಜುಲೈನಲ್ಲಿ ಅಣ್ಣಯ್ಯ ಬೇಲ್ ಮೇಲೆ ಹೊರಗಡೆ ಬಂದಿದ್ದಾನೆ. ಈ ಪ್ರಕರಣಕ್ಕೆ ಜಯಪ್ಪ ಪ್ರಮುಖ ಸಾಕ್ಷಿಯಾಗಿದ್ದರು. ಒಂದು ವೇಳೆ ಜಯಪ್ಪ ಸಾಕ್ಷಿ ಹೇಳಿದರೆ ಕಠಿಣ ಶಿಕ್ಷೆಯಾಗುವ ಭೀತಿಯಲ್ಲಿ ಅಣ್ಣಯ್ಯ ಇದ್ದನು. ಹೀಗಾಗಿ ರಾಜಿಯಾಗುವಂತೆ ಆರೋಪಿ ಅಣ್ಣಯ್ಯ ಜಯಪ್ಪನ ಹಿಂದೆ ಬಿದ್ದಿದ್ದನು. ಜಯಪ್ಪ ಜನವರಿ 31 ರಂದು ಹಾಸನ ನ್ಯಾಯಾಲಯದಲ್ಲಿ ಅಣ್ಣಯ್ಯನ ವಿರುದ್ಧ ಸಾಕ್ಷಿ ಹೇಳಿ ಮರಳಿ ಹೋಗುತ್ತಿದ್ದರು. ಈ ವೇಳೆ ಅಣ್ಣಯ್ಯ ಜಯಪ್ಪನನ್ನು ಕರೆದೊಯ್ದು ಕಂಠಪೂರ್ತಿ ಕುಡಿಸಿ ತನಗೆ ಅನುಕೂಲ ಆಗುವಂತೆ ಸಹಾಯ ಮಾಡು ಎಂದು ಮನವಿ ಮಾಡಿದ್ದನು. ತನ್ನ ಬೇಡಿಕೆಗೆ ಒಪ್ಪದಿದ್ದಾಗ ಜಯಪ್ಪನನ್ನ ಕೊಲೆ ಮಾಡಿ ಅಣ್ಣಯ್ಯ ಪರಾರಿಯಾಗಿದ್ದನು . ಸದ್ಯ ಪೊಲೀಸರು ಆರೋಪಿ ಅಣ್ಣಯ್ಯನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.