ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ಸದನದಲ್ಲಿ ಮಂಡಿಸಲಿರುವ ಬಜೆಟ್ ಬಗ್ಗೆ ಜನರಲ್ಲಾಗಲೀ, ಬಿಜೆಪಿಗಾಗಲೀ ಯಾವುದೇ ನಿರೀಕ್ಷೆ ಇಲ್ಲ, ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಜನರ ಕಿವಿಗೆ ಹೂಮುಡಿಸುವ ಕೆಲಸ ಅವರಿಂದಾಗಲಿದೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ವಿಜಯೇಂದ್ರ, ‘ಅಧಿಕಾರಕ್ಕೆ ಬಂದು 8-9 ತಿಂಗಳು ಕಳೆದರೂ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳದ ಸಿದ್ದರಾಮಯ್ಯ ಸರ್ಕಾರ, ಖಜಾನೆ ಖಾಲಿ ಮಾಡಿದೆ ಮತ್ತು ವೈಫಲ್ಯಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೆ. ದೆಹಲಿಗೆ ಹೋಗಿ ನಾಟಕ ಮಾಡುವ ಸರಕಾರ ಮಂಡಿಸುವ ಬಜೆಟ್ ಬಗ್ಗೆ ಯಾವ ಆಶಾಭಾವನೆ ಇಟ್ಟುಕೊಳ್ಳುವುದು ಸಾಧ್ಯ? ಎಂದು ಹೇಳಿದರು. ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಜೆಟ್ ನಲ್ಲಿ ಅಂಥ ಗಿಮಿಕ್ ಗಳನ್ನು ಮಾಡುವ ಪ್ರಯತ್ನ ಮಾಡುತ್ತದೆ, ಆದರೆ ನಾಡಿನ ಜನ ಪ್ರಜ್ಞಾವಂತರು, ಅವರನ್ನು ಪದೇಪದೆ ಬೇಸ್ತು ಬೀಳಿಸುವುದು ಸಾಧ್ಯವಿಲ್ಲ ಎಂದು ವಿಜಯೇಂದ್ರ ಹೇಳಿದರು.