ಮೈಸೂರು: ರಾಜ್ಯದೆಲ್ಲೆಡೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಮತ್ತು ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿಯವರನ್ನು ಬಿಜೆಪಿ ವಾಪಸ್ಸು ಕರೆದೊಯ್ಯುವ ಬಗ್ಗೆ ಚರ್ಚೆ ನಡೆದಿದೆ. ಮೈಸೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತನಗೆ ಬಿಜೆಪಿಯಲ್ಲಿ ಅವಮಾನವಾಗಿದೆ, ಅಲ್ಲಿಗೆ ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಖುದ್ದು ಜಗದೀಶ್ ಶೆಟ್ಟರ್ ಹೇಳಿರುವಾಗ ಯಾಕೆ ಪದೇಪದೆ ಆ ಪ್ರಶ್ನೆ ಕೇಳುತ್ತಿದ್ದೀರಿ ಅಂತ ಹೇಳಿದರು. ಬಿಜೆಪಿ ನಾಯಕರೆಲ್ಲ ಶೆಟ್ಟರ್ ಮತ್ತು ಸವದಿ ವಾಪಸ್ಸು ಬರುತ್ತಾರೆ ಅನ್ನುತ್ತಿದ್ದಾರೆ ಅಂತ ಪುನಃ ಅವರನ್ನು ಕೇಳಿದಾಗ, ಯಾರಯ್ಯ ನಿಮಗೆ ಅದನ್ನು ಹೇಳಿದ್ದು? ಯಡಿಯೂರಪ್ಪ ಹೇಳಿದ್ದಾರಾ? ವಿಜಯೇಂದ್ರ ಹೇಳಿದ್ರಾ ಅಂತ ಕೇಳಿದ ಸಿದ್ದರಾಮಯ್ಯ, ಬಿಜೆಪಿ ನಾಯಕರು ಬಹಳ ಜನ ಇದ್ದಾರೆ, ನಿರ್ದಿಷ್ಟವಾಗಿ ಯಾರು ಅಂತ ಹೇಳಿ ಎಂದು ಸಿದ್ದರಾಮಯ್ಯ ಹೇಳಿದರು. ವಿಧಾನಸಭಾ ಚುನಾವಣೆಯಲ್ಲಿ ತನಗೆ ಟಿಕೆಟ್ ನೀಡದೆ ದೊಡ್ಡ ಅವಮಾನ ಮಾಡಿದ್ದಾರೆ, ಹಾಗಾಗಿ ಬಿಜೆಪಿ ವಾಪಸ್ಸು ಹೋಗೋದಿಲ್ಲ ಅಂತ ಶೆಟ್ಟರ್ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.