ಚಾಮರಾಜನಗರ : ಲಾಲಿ ಹಾಡು ಹಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಮನ ಗೆದ್ದಿದ್ದ ಚಾಮರಾಜನಗರದ ಕವಿ ಮಂಜುನಾಥ್ ಅವರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವಕ್ಕೆ ಆಹ್ವಾನ ನೀಡಿದೆ. ಮಾತ್ರವಲ್ಲದೆ, ಇತಿಹಾಸದಲ್ಲೇ ಮೊದಲ ಬಾರಿಗೆ 1500 ರೈತ ದಂಪತಿಗೂ ಆಹ್ವಾನ ನೀಡಲಾಗಿದೆ. ಕಳೆದ ಬಾರಿ ಕೇವಲ ರೈತರಿಗಷ್ಟೇ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುವ ಅವಕಾಶ ನೀಡಲಾಗಿತ್ತು. ವೃತ್ತಿಯಲ್ಲಿ ಎಲ್.ಐ.ಸಿ ವಿಮಾ ಪಾಲಿಸಿದಾರನಾಗಿರುವ ಕೊಳ್ಳೆಗಾಲ ಕವಿ ಮಂಜುನಾಥ್ ಕೋವಿಡ್ ವೇಳೆ ಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ ಎಂಬ ಸಾಲಿನಿಂದ ಜೋಗುಳ ಪದ ರಚಿಸಿದ್ದರು. ಅಷ್ಟೇ ಅಲ್ಲದೆ, ಆನ್ ಲೈನ್ನಲ್ಲಿ ರಂಗೋಲಿ, ದೇಶಭಕ್ತಿ ಗೀತೆ, ಲಾಲಿಹಾಡು ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪುತ್ರನ ಒತ್ತಾಸೆಗೆ ಮಂಜುನಾಥ್ ಅವರು ಜೋಗುಳದ ಹಾಡು ರಚಿಸಿ ಹಾಡಿದ್ದರು. ಈ ಲೋರಿ ಹಾಡನ್ನು ಕೇಳಿದ ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನಾನು ಈ ಹಾಡು ಕೇಳಿದ್ದೇನೆ, ನೀವೂ ಕೇಳಿ ಎಂದು ಮೋದಿ ಪ್ರಸ್ತಾಪಿಸಿದ್ದ ವೇಳೆ ಈ ರಚನೆಗೆ ಮನ್ ಕಿ ಬಾತ್ ಯುವ ಗಾಯಕರು ಧ್ವನಿ ನೀಡಿದ್ದರು. ಈ ಲಾಲಿ ಹಾಡಿಗೆ ಆರು ಲಕ್ಷ ನಗದು ಬಹುಮಾನದ ಮನ್ನಣೆ ಕೂಡ ಸಿಕ್ಕಿತ್ತು. ಸದ್ಯ, ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕವಿ ಮಂಜುನಾಥ್ ಅವರು ಪಡೆದಿದ್ದು, ಕೇಂದ್ರ ಸರ್ಕಾರವು ಟಿಕೆಟ್ ಬುಕ್ ಕೂಡ ಮಾಡಿದೆ. ಪತಿ ಮಂಜುನಾಥ್ ಜೊತೆ ಪತ್ನಿ ಕೂಡ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.