ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಪ್ರತಾಪ್ ಸಿಂಹ ಬದಲು ರಾಜವಂಶಸ್ಥರಾದ ಯದುವೀರ್ ಒಡೆಯರ್ ಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ಬಗ್ಗೆ ವರದಿಗಳಾಗಿವೆ. ಈ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಯದುವೀರ್ ಗೆ ಟಿಕೆಟ್ ಕೊಟ್ಟರೆ ಸ್ವಾಗತ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ. ಅರಮನೆಯ ದರ್ಬಾರಿನಲ್ಲಿರುವ ಬದಲು ಸಾಮಾನ್ಯ ಪ್ರಜೆಗಳಂತೆ ಬದುಕಲು ಬಂದರೆ ಸ್ವಾಗತಿಸದಿರಲು ಆಗುತ್ತದೆಯೇ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ರಾಜ-ಪ್ರಜೆ ನಡುವಣ ವ್ಯತ್ಯಾಸ ಬದಿಗಿಟ್ಟು ಬಂದರೆ ಅವರಿಗೆ ಸ್ವಾಗತ. ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಆ ಆಸ್ತಿಗಳನ್ನು ಜನರಿಗೆ ಬಿಟ್ಟು ಕೊಡಿಸುತ್ತಾರೆ. ಅರಮನೆಯಲ್ಲಿ ಅರಾಮವಾಗಿದ್ದ ವ್ಯಕ್ತಿ ಹೋರಾಟಕ್ಕೆ ಬರುತ್ತಿದ್ದಾರೆ. ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಬೀದಿಗೆ ಬಂದ್ರೆ ಸಂತೋಷ. ಅರಮನೆ ವೈಭೋಗ ಬೇಡ, ಹೋರಾಟಕ್ಕೆ ಬರುತ್ತೇನೆ ಅಂದರೆ ಸ್ವಾಗತ. ಠಾಣೆಗೆ ಬಂದು ರಾಜರು ಸಮಸ್ಯೆ ಬಗೆಹರಿಸಿದರೆ ಸಂತೋಷ ಅಲ್ವಾ ಎಂದು ಅವರು ಹೇಳಿದರು.
ಸುಖದ ಸುಪತ್ತಿಗೆಯಲ್ಲಿದ್ದವರನ್ನು ರಾಜಕೀಯಕ್ಕೆ ತಂದವರಿಗೆ ಧನ್ಯವಾದ. ಮಹಾರಾಜರನ್ನೇ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.