ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನದ ಎರಡನೇ ದಿನದ ಕಾರ್ಯಕಲಾಪಗಳು ಆರಂಭಗೊಂಡಿವೆ. ಮೊದಲಿಗೆ ಮಾತಾಡುವ ಅವಕಾಶ ಪಡೆದ ವಿರೋಧ ಪಕ್ಷದ ನಾಯಕ ಆರ್ ಅಶೋಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಮನವಿ ಮಾಡಿದರು. ವಿಷಯ ಬೆಳಗಾವಿ ಅಧಿವೇಶನದಲ್ಲೇ ಚರ್ಚೆಯಾಗಬೇಕಿತ್ತು ಆದರೆ ತಾವು ವಿರೋಧ ಪಕ್ಷದವರ ಎತ್ತಿದ ಪ್ರಶ್ನೆಗೆ ಗಮನ ನೀಡದೆ ಆಡಳಿತ ಪಕ್ಷದ ಕಡೆ ವಾಲಿದಿರಿ ಎಂದು ಹೇಳಿದ ಆಶೋಕ, ಮಹಿಳೆಯ ಬೆತ್ತಲೆ ಪ್ರಕರಣ, ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮೊದಲಾದ ಘಟನೆಗಳು ರಾಜ್ಯದ ಜನರನ್ನು ಆತಂಕಕ್ಕೆ ದೂಡಿವೆ, ಸರ್ಕಾರ ಬದುಕಿದೆಯೋ ಸತ್ತಿದೆಯೋ ಅಂತ ಜನರು ಅಂದುಕೊಳ್ಳುವ ಮಟ್ಟಿಗೆ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದರು. ಕಳೆದ ಬಾರಿಯಂತೆ ಆ ಕಡೆ ತಿರುಗದೆ ತಮ್ಮ ಕಡೆ ತಿರುಗಿ ಅಂತ ಅಶೋಕ ಹೇಳುವಾಗ ಉತ್ತರಿಸಲು ಎದ್ದುನಿಂತ ಗೃಹ ಸಚಿವ ಜಿ ಪರಮೇಶ್ವರ್, ಅಧ್ಯಕ್ಷರು ಎಡ ಬಲ ಯಾವ ಕಡೆಯೂ ತಿರುಗೋದು ಬೇಡ ನೇರವಾಗಿ ನೋಡಲಿ ಎಂದರು.