ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನರಿಗೆ ಕಂಟಕವಾಗಿರುವ ಪುಂಡಾನೆಗಳ ಸೆರೆ ಕಾರ್ಯಾಚರಣೆ ಮುಂದುವರೆದಿದೆ. ಜನವರಿ 13 ರಂದು ಆಲೂರು ತಾಲ್ಲೂಕಿನ ನಲ್ಲೂರು ಬಳಿ ಒಂದು ಆನೆ ಸೆರೆ ಹಿಡಿದು ಸ್ಥಳಾಂತರ ಮಾಡಿದ್ದ ಅರಣ್ಯ ಇಲಾಖೆ ಮಂಗಳವಾರ ತಣ್ಣೀರ್ ಹೆಸರಿನ ಮತ್ತೊಂದು ಬೃಹತ್ ಗಾತ್ರದ ಬಲಿಷ್ಠ ಆನೆಯನ್ನು ಸೆರೆಹಿಡಿದಿದೆ. ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಂಟು ಸಾಕಾನೆಗಳ ಟೀಂ ಮತ್ತೊಂದು ಪುಂಡಾನೆಯನ್ನು ಖೆಡ್ಡಾಕ್ಕೆ ಕೆಡವಿದ್ದು ಆಪರೇಷನ್ ಪುಂಡಾನೆ ಕಾರ್ಯಾಚರಣೆ ಮುಂದುವರೆದಿದೆ.
ಡಿಸೆಂಬರ್ 4 ರಂದು ದಸರಾ ಆನೆ ಅರ್ಜುನನ ಸಾವಿನ ಬಳಿಕ ಸ್ಥಗಿತವಾಗಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಮತ್ತೆ ಆರಂಭ ವಾಗಿದೆ. ಮಂಗಳವಾರ ಬೇಲೂರು ತಾಲ್ಲೂಕಿನ ಸಿಂಗರವಳ್ಳಿ ಗ್ರಾಮದಲ್ಲಿ ಮತ್ತೊಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಳೆದ ಒಂದು ವರ್ಷದಿಂದ ಆಲೂರು ಬೇಲೂರು ಭಾಗದಲ್ಲಿ ಓಡಾಡುತ್ತಾ ಆತಂಕ ಸೃಷ್ಟಿ ಮಾಡಿದ್ದ ಒಂಟಿ ಸಲಗವನ್ನು ಅಧಿಕಾರಿಗಳು ಆಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.