ಚಿಕ್ಕಮಗಳೂರು, ಜನವರಿ 11: ಜ.22ರಂದು ಅಯೋಧ್ಯೆ (Ayodhya) ಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆ ಜಿಲ್ಲೆಯ ಶೃಂಗೇರಿಯಲ್ಲಿ ಜನವರಿ 16ರಿಂದ ಜನವರಿ 22ರವರೆಗೆ ವಿದ್ಯಾರಣ್ಯಪುರದ ರಾಮ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಶೃಂಗೇರಿ ಶಾರದಾ ಮಠದ ಜಗದ್ಗುರುಗಳ ಉಪಸ್ಥಿತಿಯಲ್ಲಿ ರಾಮ ಜಪ, ರಾಮಾಯಣ ಪಾರಾಯಣ, ಅಖಂಡ ರಾಮ ಜಪ ಹಾಗೂ ರಾಮತಾರಕ ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜನವರಿ 22ರಂದೇ ವಿದ್ಯಾರಣ್ಯಪುರ ಶ್ರೀರಾಮ ದೇಗುಲ ಉದ್ಘಾಟನೆ ನಡೆಯಲಿದೆ.
ಅಯೋಧ್ಯೆ ರಾಮ ಪ್ರಾಣ ಪ್ರತಿಷ್ಟಾಪನೆಗೆ ಶೃಂಗೇರಿ ಮಠದ ಕಿರಿಯ ಜಗದ್ಗರುಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿಗೆ ಆಹ್ವಾನ ನೀಡಲಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಟಾನೆ ನಡೆಯಲಿದೆ. ಈ ಹಿಂದೆ ತುಂಗಾ ಭದ್ರಾ ನದಿಗೆ ಕಾಶ್ಮೀರ ಪಂಡಿತರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಜಲವನ್ನ ಅಯೋಧ್ಯೆಗೆ ಕಳಿಸಲಾಗಿತ್ತು.
ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಇತ್ತ ಕೊಪ್ಪಳ ಜಿಲ್ಲೆ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ರಾಮ ತಾಂಡವ ಸ್ತೋತ್ರ ಪಠಣ ನಡೆಯುತ್ತಿದೆ. ಹನುಮ ಜನ್ಮ ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ರಾಮ ನಾಮ ಜಪ ಮಾಡಿದ್ದಾರೆ. ಶಾಸಕ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಭಾಗಿಯಾಗಿದ್ದರು.