ಬೆಂಗಳೂರು, ಡಿ.30: ಬಿಎಂಟಿಸಿ ನಿಗಮ ಬಿಎಂಟಿಸಿ (BMTC) ನೌಕರರಿಗೂ ಸಿಹಿ ಸುದ್ದಿ ನೀಡಿದೆ. ಇಲ್ಲಿಯವರೆಗೆ ಕೆಎಸ್ಆರ್ಟಿಸಿಯಲ್ಲಿ ಕಂಡಕ್ಟರ್ ಡ್ರೈವರ್ ಹಾಗೂ ನೌಕರರು ಮೃತಪಟ್ಟರೇ ಮಾತ್ರ ಒಂದು ಕೋಟಿ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಬಿಎಂಟಿಸಿ ತನ್ನ ಸಂಸ್ಥೆಯ ನೌಕರರು ಮೃತಪಟ್ಟರೂ ಐವತ್ತು ಲಕ್ಷ ರೂಪಾಯಿ ನೀಡಲು ಮುಂದಾಗಿದೆ. 2023 ಅಕ್ಟೋಬರ್ 30ರಂದು ಆಕ್ಸಿಡೆಂಟ್ನಲ್ಲಿ ಮೃತಪಟ್ಟಿದ್ದ ಬಿಎಂಟಿಸಿ ಡ್ರೈವರ್ ಮಲ್ಲಿಕಾರ್ಜುನ ಅವರ ಹೆಂಡತಿ ರುದ್ರಮ್ಮನಿಗೆ ಇದೆ ಮೊದಲ ಬಾರಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಐವತ್ತು ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಯೂನಿಯನ್ ಬ್ಯಾಂಕ್ನೊಂದಿಗೆ 2023 ಆಗಸ್ಟ್ 21ರಂದು ಮೂರು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಒಡಂಬಡಿಕೆಯನ್ವಯ ಯೂನಿಯನ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ ಸಿಬ್ಬಂದಿ ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಬ್ಯಾಂಕ್ ವತಿಯಿಂದ ಕೆಲವು ಸೌಲಭ್ಯಗಳನ್ನು ನೀಡಲಾಗುತ್ತದೆ.
ಬ್ಯಾಂಕ್ ವತಿಯಿಂದ ನೀಡಲಾಗುತ್ತಿರುವ ಸೌಲಭ್ಯಗಳು
- ಮಾಸಿಕ ವೇತನ 25,000/-ಕ್ಕಿಂತ ಕಡಿಮೆ ಇದ್ದಲ್ಲಿ ರೂ.50.00 ಲಕ್ಷ ವಿಮಾ ಮೊತ್ತ ಮತ್ತು ಡೆಬಿಟ್ ಕಾರ್ಡ್ ಹೊಂದಿದ್ದಲ್ಲಿ ರೂ.4.00 ಲಕ್ಷ ಒಟ್ಟು ರೂ.54.00 ಲಕ್ಷಗಳ ಮೊತ್ತ ಪಾವತಿಸಲಾಗುವುದು.
- ಮಾಸಿಕ ವೇತನ ರೂ.25,000/-ಕ್ಕಿಂತ ಮೇಲ್ಪಟ್ಟಲ್ಲಿ ರೂ.50.00 ಲಕ್ಷ ವಿಮಾ ಮೊತ್ತ ಮತ್ತು ಡೆಬಿಟ್ ಕಾರ್ಡ್ ಹೊಂದಿದ್ದಲ್ಲಿ ರೂ.15 ಲಕ್ಷಗಳು ಒಟ್ಟು ರೂ.65.00 ಲಕ್ಷಗಳ ಮೊತ್ತ ಪಾವತಿಸಲಾಗುವುದು.
- ರೂ.25,000/- ಕ್ಕಿಂತ ಹೆಚ್ಚು ವೇತನ ಇರುವ ಸಿಬ್ಬಂದಿಗಳಿಗೆ ವಾರ್ಷಿಕ ರೂ.15,000/- ವೈದ್ಯಕೀಯ ಮರುಪಾವತಿ ಸೌಲಭ್ಯಇನ್ನು ಮೃತ ಮಲ್ಲಿಕಾರ್ಜುನ ಯೂನಿಯನ್ ಬ್ಯಾಂಕ್ನಲ್ಲಿ ವೇತನ ಖಾತೆ ಹೊಂದಿದ್ದು, ಇದಲ್ಲದೆ ಸಂಸ್ಥೆಯ ವತಿಯಿಂದ ಮೃತಪಟ್ಟ ಸಿಬ್ಬಂದಿಯ ಅವಲಂಭಿತರಿಗೆ ಕೆಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಬಿಎಂಟಿಸಿ ವತಿಯಿಂದ ಮೃತ ಮಲ್ಲಿಕಾರ್ಜುನ ಕುಟುಂಬಕ್ಕೆ ನೀಡಲಾಗುವ ಸೌಲಭ್ಯ
- ಉಪದಾನ
- ಭವಿಷ್ಯನಿಧಿ
- ಆಂತರೀಕ ಗುಂಪು ವಿಮಾ ಮೊತ್ತ ರೂ.3.00 ಲಕ್ಷ
- ಗಳಿಕೆ ರಜೆ
- ಡಿಆರ್ಬಿಎಫ್
- ಇ.ಡಿ.ಎಲ್ ಐ ( ಗುಂಪು ವಿಮೆ )
- ಅನುಕಂಪದ ಆಧಾರದ ಮೇರೆಗೆ ಕೆಲಸ