ಮೈಸೂರು, ಡಿಸೆಂಬರ್ 9, 2025 : ಮೈಸೂರಲ್ಲಿ ವೈದ್ಯಕೀಯ ವಿಸ್ಮಯವೊಂದು ನಡೆದಿದೆ. ವ್ಯಕ್ತಿಯೋರ್ವನ ತುಂಡಾದ ಕೈಯನ್ನು ಮರುಜೋಡಿಸಿರೋ ಮಣಿಪಾಲ್ ಆಸ್ಪತ್ರೆ ವೈದ್ಯರು ದಾಖಲೆ ಬರೆದಿದ್ದಾರೆ.
ಕರೆಂಟ್ ಇಲ್ಲದ ವೇಳೆಯಲ್ಲಿ ಕೆಟ್ಟು ಹೋಗಿದ್ದ ಹುಲ್ಲು ಕಟಾವು ಮಾಡುವ ಯಂತ್ರವನ್ನು ರಿಪೇರಿ ಮಾಡುತ್ತಿದ್ದ ವೇಳೆ ಹಠಾತ್ತನೆ ಕರೆಂಟ್ ಬಂದ ಪರಿಣಾಮ ವ್ಯಕ್ತಿಯ ಕೈ ಯಂತ್ರಕ್ಕೆ ಸಿಲುಕಿ ಸಂಪೂರ್ಣವಾಗಿ ತುಂಡಾಗಿತ್ತು. ಆದರೆ, ಮೈಸೂರಿನ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರು ನಡೆಸಿದ 5 ಗಂಟೆಗಳ ಸುದೀರ್ಘ ಮತ್ತು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಇದೀಗ ಆತನ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದು ಆತನ ಕೈಯನ್ನು ಮರು ಜೋಡಿಸಲಾಗಿದೆ.
ಅವಘಡ ಸಂಭವಿಸಿದಾಗ ಕೈ ಮಣಿಕಟ್ಟಿನ ಭಾಗದಿಂದ ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಆದರೆ ಧೃತಿಗೆಡದ ಯುವಕ ಮತ್ತು ಸಹೋದ್ಯೋಗಿಗಳು, ಘಟನೆ ನಡೆದ ಕೇವಲ ಎರಡು ಗಂಟೆಯೊಳಗೆ ತುಂಡಾದ ಕೈಯೊಂದಿಗೆ ಮಣಿಪಾಲ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಧಾವಿಸಿದ್ದರು. ಶೀಘ್ರ ಆಸ್ಪತ್ರೆ ತಲುಪಿದ್ದು ಮತ್ತು ವೈದ್ಯರು ಕ್ಷಿಪ್ರವಾಗಿ ತೆಗೆದುಕೊಂಡ ನಿರ್ಧಾರವೇ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ರೋಗಿಯ ದೇಹ ಮತ್ತು ಮಾನಸಿಕ ಸ್ಥಿತಿಯನ್ನು ಸ್ಥಿರಗೊಳಿಸಿ, ಶಸ್ತ್ರಚಿಕಿತ್ಸೆಗೆ ಸಜ್ಜುಗೊಳಿಸಲಾಯಿತು.ಇದು ವಿಶೇಷ ಶಸ್ತ್ರಚಿಕಿತ್ಸೆಯಾಗಿದ್ದು, ಹಿರಿಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಅಜಯ್ ಹೆಗ್ಡೆ ಮತ್ತು ಪ್ಲಾಸ್ಟಿಕ್ ಸರ್ಜನ್ ಡಾ. ವಿಜಯ್ ಕುಮಾರ್ ಎನ್. ನೇತೃತ್ವದ ತಂಡಕ್ಕೆ ಇದೊಂದು ದೊಡ್ಡ ಸವಾಲಾಗಿತ್ತು.
ಮೊದಲ ಹಂತದಲ್ಲಿ ಡಾ. ಅಜಯ್ ಹೆಗ್ಡೆ ಅವರ ತಂಡ, ರಕ್ತನಾಳಗಳ ಜೋಡಣೆಗೆ ಅನುಕೂಲವಾಗುವಂತೆ ‘ಪ್ರಾಕ್ಸಿಮಲ್ ರೋ ಕಾರ್ಪೆಕ್ಟಮಿ’ (Proximal Row Carpectomy) ವಿಧಾನವನ್ನು ಬಳಸಿತು. ಮಣಿಕಟ್ಟಿನ ಜಜ್ಜಿಹೋದ ಸಣ್ಣ ಮೂಳೆಗಳನ್ನು ತೆಗೆದುಹಾಕಿ, ಕೆ-ವೈರ್ ಮತ್ತು ಬಾಹ್ಯ ಜೋಡಣೆ ಸಾಧನದ ಮೂಲಕ ಮಣಿಕಟ್ಟಿನ ರಚನೆಯನ್ನು ಮರು ರೂಪಿಸಲಾಯಿತು.ಇದಾದ ಬಳಿಕ ಡಾ. ವಿಜಯ್ ಕುಮಾರ್ ಅವರ ತಂಡವು ಅತ್ಯಂತ ಸವಾಲಿನ ಕೆಲಸಕ್ಕೆ ಕೈಹಾಕಿತು. ಮೈಕ್ರೋವಾಸ್ಕುಲರ್ ತಂತ್ರಜ್ಞಾನದ ಮೂಲಕ ಕತ್ತರಿಸಿ ಹೋಗಿದ್ದ ರಕ್ತನಾಳಗಳು, ಸೂಕ್ಷ್ಮ ನರಗಳು ಮತ್ತು ಸ್ನಾಯುರಜ್ಜುಗಳನ್ನು ಮರುಜೋಡಿಸಲಾಯಿತು. ಸತತ ಐದು ಗಂಟೆಗಳ ಶ್ರಮದ ನಂತರ, ಜೋಡಿಸಲಾದ ಕೈಯಲ್ಲಿ ರಕ್ತಸಂಚಾರ ಪುನರಾರಂಭಗೊಂಡಿದೆ. ವೈದ್ಯರ ಶ್ರಮ ಸಾರ್ಥಕಗೊಂಡಿದೆ. ಯುವಕನ ಕೈ ಮೊದಲಿನಂತೆ ಆಗಿದ್ದು, ಕುಟುಂಬ ಸದಸ್ಯರು ಸಂತಸಗೊಂಡಿದ್ದಾರೆ.
