ಹಾಸನ, ಸೆ.15: ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಫೋನ್ ಬಳಸಿರುವ ಬಗ್ಗೆ ರಾಜಕೀಯವಾಗಿ ಭಾರೀ ಚರ್ವೆಗೆ ಕಾರಣವಾಗಿದೆ. ಇನ್ನು ಎಫ್ಎಸ್ಎಲ್ ವರದಿಯಲ್ಲೂ ಮಹತ್ವದ ವಿಚಾರಗಳು ಪತ್ತೆಯಾಗಿದೆ, ಇದೀಗ ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸ ಮುಗಿಸಿ ರಾಜ್ಯಕ್ಕೆ ಮರಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವಿಚಾರವನ್ನು ತಮ್ಮ ಕುಟುಂಬವನ್ನು ಗುರಿಯಾಗಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಮಾವಿನಕೆರೆಯಲ್ಲಿ ಈ ಹೇಳಿಕೆ ನೀಡಿದ ಕುಮಾರಸ್ವಾಮಿ, ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿರುವ ವ್ಯಕ್ತಿಗೆ ಈಗ ಫೋನ್ ಎಲ್ಲಿಂದ ಬಂತು, ಯಾರು ಕೊಟ್ಟರು ಎಂದು ಪ್ರಶ್ನಿಸಿದರು. ಜೈಲಿನೊಳಗಡೆ ಅಶ್ಲೀಲ ಚಿತ್ರಗಳು ಹೇಗೆ ಬಂದವು ಎಂಬ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದರು. ಪ್ರಕರಣದ ಸಮಯದ ಬಗ್ಗೆಯೂ ಕುಮಾರಸ್ವಾಮಿ ಪ್ರಶ್ನೆಗಳನ್ನು ಎತ್ತಿದರು. ಕೆಪಿಎಸ್ಸಿ ಹಗರಣ, ನೈಸ್ ಹಗಲು ದರೋಡೆ ಹಾಗೂ ಬಿಡದಿ ಭೂ ಹಗರಣಗಳಿಗೆ ಸಂಬಂಧಿಸಿದಂತೆ ತಾವು ಪ್ರಸ್ತಾಪಿಸಿದ ವಿಚಾರಗಳು ಬೆಳಕಿಗೆ ಬಂದ ನಂತರವೇ ಈ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಹೊಸದಾಗಿ ಸರಣಿಯಂತೆ ಬಿಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ದೇವೇಗೌಡರ ಕುಟುಂಬದವರ ಧ್ವನಿ ಅಡಗಿಸಲು ಈ ವಿಚಾರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಸರ್ವನಾಶ ಮಾಡುವ ಆದ್ಯತೆಯನ್ನು ಹೊಂದಿದ್ದಾರೆ ಎಂದು ಕುಮಾರಸ್ವಾಮಿ ನೇರವಾಗಿ ಆರೋಪಿಸಿದರು. 400 ಅತ್ಯಾಚಾರ ಪ್ರಕರಣಗಳ ಬಗ್ಗೆ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಎಷ್ಟು ಕುಟುಂಬಗಳ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದೆ ಎಂದು ಪ್ರಶ್ನಿಸಿದರು. ತಮ್ಮ ಕುಟುಂಬದ ಸದಸ್ಯರೊಬ್ಬರಿಂದ ಅನ್ಯಾಯವಾಗಿದೆ ಎಂದು ಬಿಂಬಿಸುವ ಬದಲು, ಎಷ್ಟು ಕುಟುಂಬಗಳ ಹೆಣ್ಣುಮಕ್ಕಳ ಮರ್ಯಾದೆ ಕಾಪಾಡಿದ್ದೀರಿ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು. ಈ ಬೆಳವಣಿಗೆಗಳಿಗೆ ಹೆದರಿ ತಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನ್ಯಾಯ ಮತ್ತು ಸತ್ಯಕ್ಕೆ ತಲೆಬಾಗುವುದಾಗಿ ಹೇಳಿದ ಅವರು, “ನಾನಾಗಲಿ ಅಥವಾ ಬೇರೆಯವರಾಗಲಿ ತಪ್ಪು ಮಾಡಿದ್ದರೆ ತಲೆಬಾಗಲು ಸಿದ್ಧನಿದ್ದೇನೆ. ಆದರೆ, ನಿಮ್ಮಂತೆ ಎಲ್ಲವನ್ನೂ ದೋಚುವ ಕೆಲಸ ಮಾಡಿಲ್ಲ” ಎಂದು ಹೇಳಿದರು. ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಸಲಾಗುತ್ತಿರುವ ತೇಜೋವಧೆಯನ್ನು ಅವರು ಖಂಡಿಸಿದರು. ದೇವೇಗೌಡರು ತಮ್ಮ 75 ವರ್ಷಗಳ ರಾಜಕೀಯ ಜೀವನದಲ್ಲಿ ಅಕ್ರಮಗಳ ವಿರುದ್ಧವೇ ಹೋರಾಡಿದವರು ಎಂದು ನೆನಪಿಸಿಕೊಂಡರು. ಅವರ ಮಾರ್ಗದಲ್ಲಿ ತಾನು ಮುಂದುವರಿಯುವುದಾಗಿ, ತಮ್ಮ ಧ್ವನಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
