ನಂಜನಗೂಡು, ಏಪ್ರಿಲ್ 18, 2026 : ತಾಲೂಕಿನ ಹೆಡಿಯಾಲ ಸಮೀಪದ ಹಾದನೂರು ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ಗ್ರಾಮಸ್ಥರು ಮತ್ತು ರೈತರ ದೀರ್ಘಕಾಲದ ಭೀತಿ ದೂರವಾದಂತಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯು ಅತ್ಯಂತ ಸವಾಲಿನಿಂದ ಕೂಡಿತ್ತು. ಒಂದು ಕಡೆ ಹುಲಿಯ ಹಾವಳಿಯಿಂದ ಆಕ್ರೋಶಗೊಂಡಿದ್ದ ರೈತರ ಪ್ರತಿಭಟನೆ, ಇನ್ನೊಂದೆಡೆ ದಟ್ಟ ಪೊದೆಯಲ್ಲಿ ಅಡಗಿದ್ದ ಹುಲಿಯನ್ನು ಪತ್ತೆ ಹಚ್ಚುವ ಅನಿವಾರ್ಯತೆ ಅರಣ್ಯ ಇಲಾಖೆಯ ಮುಂದಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯು ಎರಡು ಸಾಕಾನೆಗಳನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಕಾರ್ಯಾಚರಣೆ ರೂಪಿಸಿತ್ತು.
ಇಡೀ ದಿನ ನಡೆದ ಹರಸಾಹಸದ ನಂತರ, ಅಡಗಿದ್ದ ಹುಲಿಯನ್ನು ಪತ್ತೆಹಚ್ಚಿ ಅರಿವಳಿಕೆ ಮದ್ದು ನೀಡುವ ಮೂಲಕ ಸೆರೆಹಿಡಿಯಲಾಯಿತು. ಸೆರೆಸಿಕ್ಕ ಹುಲಿಯನ್ನು ಹೆಚ್ಚಿನ ನಿಗಾ ಮತ್ತು ರಕ್ಷಣೆಗಾಗಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಲಾಗಿದೆ. ಅರಣ್ಯ ಇಲಾಖೆಯ ಈ ತ್ವರಿತ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಹಾದನೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರ್ಯಾಚರಣೆಯ ಸ್ಥಳದಲ್ಲಿ ಸಿಎಫ್ ಪ್ರಭಾಕರನ್, ಎಸಿಎಫ್ ಪ್ರಭಾಕರ್, ಆರ್ ಎಫ್ ಓ ಕೃಷ್ಣ ಸೇರಿದಂತೆ ವಿವಿಧ ವಲಯಗಳ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದರು.
