ಪ್ರತಿನಿಧಿ ವರದಿ ಹುಣಸೂರು
ಏ. 26ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ತಾಲೂಕಿನಲ್ಲಿ ಒಟ್ಟು ೨೭೪ ಮತಗಟ್ಟೆ [ಗ್ರಾಮೀಣ ಭಾಗದಲ್ಲಿ ೨೩೩ , ನಗರದಲ್ಲಿ ೪೧] ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ತಿಳಿಸಿದರು.
೧೦೯೬ ಮಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ೬೯ ಮೈಕ್ರೋ ಅಬ್ಸವರ್ರ್ ಗಳು ಇದ್ದಾರೆ. ಇದಲ್ಲದೆ, ಮುಂಜಾಗ್ರತಾ ಕ್ರಮವಾಗಿ ೧೫೪ ಮಂದಿಯನ್ನು ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗಿದ್ದು, ಈ ಮೀಸಲು ಇಟ್ಟಿರುವ ಸಿಬ್ಬಂದಿ ಚುನಾವಣೆಯ ಹಿಂದಿನ ದಿನವೇ ಕೇಂದ್ರಸ್ಥಾನದಲ್ಲಿ ಹಾಜರಿರಬೇಕೆಂದು ಸೂಚಿಸಲಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಏ. ೨೫ರಂದು ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿ ಮಸ್ಟರಿಂಗ್ ಮತ್ತು ಏ. ೨೬ರಂದು ಸಂಜೆ ೬ರ ನಂತರ ಇದೇ ವಿದ್ಯಾಸಂಸ್ಥೆಯಲ್ಲಿ ಡಿ ಮಸ್ಟರಿಂಗ್ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮತದಾರರೇ ಆಗಿದ್ದು, ಬೇರೆ ತಾಲೂಕಿನಿಂದ ಹುಣಸೂರು ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಒಟ್ಟು ೫೬೩ ಜನ ಇದ್ದಾರೆ. ಏ.೨೬ರಂದು ಅವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ತಾಲೂಕಿನಲ್ಲಿ ೩೬೨ ಅಂಚೆ ಮತದಾರರಿದ್ದು ಈವರೆಗೆ ೨೮೧ ಮಂದಿ ಬ್ಯಾಲೆಟ್ ಪೇಪರ್ ಮೂಲಕ ಮತಚಲಾಯಿಸಿದ್ದಾರೆ. ಏ.೨೫ರವರೆಗೂ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಉಪವಿಭಾಗ ವ್ಯಾಪ್ತಿಯಲ್ಲಿ ಐವರು ಗಡೀಪಾರು: ಹುಣಸೂರು ಉಪವಿಭಾಗ ವ್ಯಾಪ್ತಿಯ ೬ ತಾಲೂಕುಗಳಿಂದ ಒಟ್ಟು ೫ ಮಂದಿಯನ್ನು ಗಡಿಪಾರು ಮಾಡಲಾಗಿದೆ. ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಬ್ಬರನ್ನು ಗಡಿಪಾರು ಮಾಡಲಾಗಿದೆ. ತಾಲೂಕಿನ ಎಲ್ಲ ಮತಗಟ್ಟೆ ಕೇಂದ್ರದಲ್ಲು ವೆಬ್ಕಾಸ್ಟಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶೇ.೩೦ರ ಪ್ರಮಾಣದಲ್ಲಿ ಇವಿಎಂ ಯಂತ್ರವನ್ನೂ ಹೆಚ್ಚುವರಿಯಾಗಿ ಕಾಯ್ದಿರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
೨ ಗಂಟೆಗೊಮ್ಮೆ ಅನೌನ್ಸ್ ಮೆಂಟ್: ಎಂಸಿಸಿ ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದಲ್ಲಿ ೧೬ ಮತಗಟ್ಟೆಗಳು ಹಾಗೂ ನಗರ ವ್ಯಾಪ್ತಿಯಲ್ಲಿ ೨೪ ಮತಗಟ್ಟೆಗಳಲ್ಲಿ ಅತಿ ಕಡಿಮೆ(ಶೇ.೪೦ಕ್ಕೂ ಕಡಿಮೆ) ಮತದಾನವಾದ ದಾಖಲೆಗಳಿವೆ. ಇಂತಹ ಮತಗಟ್ಟೆಗಳಲ್ಲಿ ಪರಿಸ್ಥಿತಿ ಸುಧಾರಿಸಲು ಸೇರಿದಂತೆ ಮತದಾನದ ಶೇಕಡವಾರು ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಮತದಾನದ ದಿನ ಪ್ರತಿ ಎರಡು ಗಂಟೆಗೊಮ್ಮೆ ಎಲ್ಲ ೨೭೪ ಮತಗಟ್ಟೆ ವ್ಯಾಪ್ತಿಯಲ್ಲಿ ಆಟೋಗಳಲ್ಲಿ ಧ್ವನಿವರ್ಧಕದ ಮೂಲಕ ಮತದಾರರನ್ನು ಮತಗಟ್ಟೆಗೆ ಬಂದು ಮತಚಲಾಯಿಸಲು ಕೋರುವ ಧ್ವನಿಸುರುಳಿಯನ್ನು ಬಿತ್ತರಿಸಲಾಗುವುದು. ಕಳೆದ ಚುನಾವಣೆಯಲ್ಲಿ ತಾಲೂಕಿನಲ್ಲಿ ಶೇ.೭೭ರಷ್ಟು ಮತದಾನವಾಗಿದ್ದು ಈ ಬಾರಿ ಕನಿಷ್ಠ ಶೇ.೫ರ ಪ್ರಮಾಣದ ಹೆಚ್ಚಳದ ಗುರಿ ಇರಿಸಿಕೊಳ್ಳಲಾಗಿದೆ ಎಂದರು.
ಪೊಲೀಸ್ ಸಿಬ್ಬಂದಿ: ಮತದಾನದ ದಿನ ತಾಲೂಕಿನಾದ್ಯಂತ ೫೬೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವಿವಿಧ ಹಂತಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆಂದು ಡಿವೈಎಸ್ಪಿ ಗೋಪಾಲಕೃಷ್ಣ ತಿಳಿಸಿದರು. ೧ ಡಿವೈಎಸ್ಪಿ, ೪ ಇನ್ಸ್ ಪೆಕ್ಟರ್ ಗಳು, ೧೭ ಸಬ್ ಇನ್ಸ್ ಪೆಕ್ಟರ್ ಗಳು, ೧೫೦ಕ್ಕೂ ಹೆಚ್ಚು ಎಎಸ್ಐಗಳು, ಒಂದು ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ತುಕಡಿ, ೧೭ ಸೆಕ್ಟರ್ ಮೊಬೈಲ್ ತಂಡಗಳು, ಶಿವಮೊಗ್ಗ, ಹಾವೇರಿಯಿಂದ ಒಟ್ಟು ೧೪೦ಕ್ಕೂ ಹೆಚ್ಚು ಸಿವಿಲಿಯನ್ ಪೊಲೀಸ್, ಬಳ್ಳಾರಿಯಿಂದ ೧೮೦ಕ್ಕೂ ಹೆಚ್ಚುಹೋಂಗಾರ್ಡ್ ಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ತಾಲೂಕಿನ ೨೭೧ ಮತಗಟ್ಟೆ ಕೇಂದ್ರಗಳಲ್ಲಿ ತಲಾ ಒಬ್ಬ ವಿದ್ಯಾರ್ಥಿ(೯ ಅಥವಾ ೧೦ನೇ ತರಗತಿಯ ವಿದ್ಯಾರ್ಥಿ) ಸ್ವಯಂಸೇವಕನಾಗಿ ಮತಗಟ್ಟೆ ಕೇಂದ್ರದಲ್ಲಿ ಸೇವೆ ಸಲ್ಲಿಸಲಿದ್ದಾನೆ. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಸೇವೆಯ ಕುರಿತು ಹೋಬಳಿ ಮಟ್ಟದಲ್ಲಿ ಈಗಾಗಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಚುನಾವಣಾ ಸಿಬ್ಬಂದಿಗೆ ಆಯಾ ಮತಗಟ್ಟೆ ವ್ಯಾಪ್ತಿಯ ಶಾಲೆಯಲ್ಲಿ ಬಿಸಿಯೂಟ ಅಡುಗೆ ಸಿಬ್ಬಂದಿ ಊಟ ತಯಾರಿಸಿಕೊಡಲಿದ್ದಾರೆ. ಊಟದ ವೆಚ್ಚವನ್ನು ಚುನಾವಣಾ ಸಿಬ್ಬಂದಿಯೇ ಭರಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ತಹಸೀಲ್ದಾರ್ ಎಂ.ನಯನಾ, ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್ ಹಾಜರಿದ್ದರು.
೨೪ಊUಓ೧: ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಬಳಕೆಯಾಗುತ್ತಿರುವ ಮಸ್ಟರಿಂಗ್ ವೆಬ್ ಆಪ್ ಅನ್ನು ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಪ್ರದರ್ಶಿಸಿದರು. ಡಿವೈಎಸ್ಪಿ ಗೋಪಾಲಕೃಷ್ಣ, ಎಂಸಿಸಿ ನೋಡಲ್ ಅಧಿಕಾರಿ ಶಿವಕುಮಾರ್ ಇದ್ದರು.