ನಂಜನಗೂಡು, ನವೆಂಬರ್ 17, 2025 :ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಾನಿಗಳು ನೀಡಿದ್ದ ಪೀಠೋಪಕರಣಗಳಿಗಾಗಿ ನಕಲಿ ಬಿಲ್ ಸೃಷ್ಟಿಸಿ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪ ಪಿಡಿಓ (ಪಂಚಾಯತಿ ಅಭಿವೃದ್ಧಿ ಅಧಿಕಾರಿ) ಜ್ಯೋತಿ ಅವರ ವಿರುದ್ಧ ಕೇಳಿಬಂದಿದೆ.

ಜೆ.ಪಿ. ಹುಂಡಿ ಆಶ್ರಮದ ಮ್ಯಾನೇಜರ್ ಅವರು ಕುರಿಹುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ 11 ಅಂಗನವಾಡಿ ಕೇಂದ್ರಗಳಿಗೆ ಅಂದಾಜು ₹87,000 ಮೌಲ್ಯದ ಪೀಠೋಪಕರಣಗಳನ್ನು ದಾನವಾಗಿ ನೀಡಿದ್ದರು. ಆದರೆ, ಗ್ರಾಮ ಪಂಚಾಯತಿ ಪಿಡಿಓ ಜ್ಯೋತಿ ಅವರು ಈ ದಾನಿಗಳಿಂದ ಬಂದ ಪೀಠೋಪಕರಣಗಳಿಗೆ ಸಂಬಂಧಿಸಿದಂತೆ, ಗ್ರಾಮ ಪಂಚಾಯತಿಯಿಂದಲೇ ಖರೀದಿಸಲಾಗಿದೆ ಎಂದು ನಕಲಿ ದಾಖಲೆಗಳು ಮತ್ತು ಬಿಲ್ಗಳನ್ನು ಸೃಷ್ಟಿಸಿ, ಸರ್ಕಾರಿ ಖಜಾನೆಯ ₹87,000 ಹಣವನ್ನು ಗುಳುಂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ದಾನಿಗಳ ನೆರವಿನ ನಡುವೆಯೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಗ್ರಾಮದ ಮುಖಂಡರಾದ ಚಂದ್ರಶೇಖರ್ ಎಂಬುವವರು ಈ ಹಗರಣವನ್ನು ಬಯಲಿಗೆ ತಂದಿದ್ದಾರೆ. ಪಿಡಿಓ ಜ್ಯೋತಿ ಅವರು ₹87,000 ಮೊತ್ತದ ಬಿಲ್ ಮಾಡಿ ತಗಲಾಕಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ, ಚಂದ್ರಶೇಖರ್ ಅವರು ತಕ್ಷಣವೇ ಕಾರ್ಯನಿರ್ವಾಹಕ ಅಧಿಕಾರಿ (ಇಓ) ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಈ ಹಣ ಗುಳುಂ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ, ಆರೋಪಿತ ಪಿಡಿಓ ಜ್ಯೋತಿ ಅವರು ರಜೆಯ ಮೇಲೆ ತೆರಳಿದ್ದಾರೆ. ಈ ಬೆಳವಣಿಗೆಯು ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ, ಕುರಿಹುಂಡಿ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಪಿಡಿಓ ಜ್ಯೋತಿ ಅವರನ್ನು ತಕ್ಷಣವೇ ಅಮಾನತುಪಡಿಸುವಂತೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಈ ಕುರಿತು ಇಓ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
