ಮೈಸೂರು, ಜುಲೈ 22, 2025 : ರಾಜ್ಯದಲ್ಲಿ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ಸಾಲು ಸಾಲು ಶೈಕ್ಷಣಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ, ಜವಾಬ್ದಾರಿ ಹೊರಬೇಕಾದ ಉನ್ನತ ಶಿಕ್ಷಣ ಸಚಿವರೇ ಇಲ್ಲದಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಸಂಚಾಲಕ ನಂದನ್ ಕುಮಾರ್.ಹೆಚ್ ಮಾತನಾಡಿ, ಸಾರಿಗೆ ಸಂಸ್ಥೆಯ ಬಸ್ಗಳ ತೀವ್ರ ಕೊರತೆ ಹಾಗೂ ಬಸ್ ಪಾಸ್ ವಿತರಣೆಯಲ್ಲಿನ ವಿಳಂಬದಿAದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿತ್ಯ ಫುಟ್ಬೋರ್ಡ್ ಮೇಲೆ ಜೀವದ ಹಂಗು ತೊರೆದು ಪ್ರಯಾಣಿಸುತ್ತಿದ್ದಾರೆ. ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಪ್ರವೇಶಾತಿ ಪ್ರಕ್ರಿಯೆ ಮುಗಿದಿಲ್ಲ. ಇದರಿಂದ ದೂರದ ಊರುಗಳಿಂದ ಬಂದ ವಿದ್ಯಾರ್ಥಿಗಳಿಗೆ ವಸತಿ-ಊಟವಿಲ್ಲದಂತಾಗಿದೆ. ಕಳೆದ ಸಾಲಿನಿಂದಲೂ ಬಾಕಿ ಇರುವ ವಿದ್ಯಾಸಿರಿ ಸೇರಿದಂತೆ ವಿವಿಧ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳನ್ನು ಬಿಡುಗಡೆ ಮಾಡದೆ ತಾಂತ್ರಿಕ ದೋಷಗಳ ನೆಪವೊಡ್ಡಿ ಇಲಾಖೆಗಳು ಕಾಲಹರಣ ಮಾಡುತ್ತಿವೆ ಎಂದು ದೂರಿದರು.
ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 3,000 ಕಾಯಂ ಉಪನ್ಯಾಸಕರು ಮಾತ್ರ ಇದ್ದು, ಇದು ಅಗತ್ಯದ ಕೇವಲ ಶೇ.20ರಷ್ಟಾಗಿದೆ. ಉಳಿದ ಶೇ.80ರಷ್ಟು ಬೋಧನೆಗೆ ಅಗತ್ಯವಿರುವ 12,000 ಅತಿಥಿ ಉಪನ್ಯಾಸಕರ ನೇಮಕಾತಿ ತಕ್ಷಣ ಪೂರ್ಣಗೊಳ್ಳಬೇಕಿದೆ. ಕೂಡಲೇ ಸಮರ್ಪಕ ಬಸ್ ಸೌಕರ್ಯ ಒದಗಿಸುವುದು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ಸುಲಭವಾಗಿ ಬಸ್ ಪಾಸ್ ವಿತರಿಸಬೇಕು. ದೂರದ ಊರುಗಳಿಂದ ಬರುವ ಬಡ ವಿದ್ಯಾರ್ಥಿಗಳು ತಂಗಲು ಜಾಗವಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರಿ ಹಾಸ್ಟೆಲ್ಗಳ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಮೂಲ ಸೌಕರ್ಯ ಸುಧಾರಿಸಬೇಕು ಎಂದು ಆಗ್ರಹಿಸಿದರು.
ಬಾಕಿ ಇರುವ ಎಲ್ಲಾ ವಿದ್ಯಾಸಿರಿ ಹಾಗೂ ಇತರ ವಿದ್ಯಾರ್ಥಿವೇತನಗಳನ್ನು ಬಿಡುಗಡೆ ಮಾಡಬೇಕು. ಸಾರಿಗೆ, ಹಾಸ್ಟೆಲ್ ವಸತಿ ಹಾಗೂ ವಿದ್ಯಾರ್ಥಿವೇತನದ ಈ ಮೂರೂ ಪ್ರಮುಖ ಬೇಡಿಕೆಗಳನ್ನು ಮುಂದಿನ ಒಂದು ವಾರದೊಳಗೆ ಈಡೇರಿಸದಿದ್ದರೆ, ರಾಜ್ಯಾದ್ಯಂತ ಕಾಲೇಜು ಬಂದ್ ಮಾಡಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಸಜಿತ್, ಗೌರವ್, ಮೇಘನಾ, ಲಕ್ಷಿ, ಸ್ಮಿತಾ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂದಾರ ಬಾಳುಗೋಡು, ಭಾನುತೇಜ ಸೇರಿದಂತೆ ಹಲವರು ಭಾಗವಹಿಸಿದ್ದರು.
