ಚಾಮರಾಜನಗರ : ಹೊಲಕ್ಕೆ ನುಗ್ಗಿದ ಹಸು, ಎತ್ತುಗಳ ಮೇಲೆ ಮಚ್ಚಿನಿಂದ ದಾಳಿ ನಡೆಸಿ ವಿಕೃತಿ ಮೆರೆಯಲಾದ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಒಡೆಯರಪಾಳ್ಯ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ. ದನಗಳ ಕಾಲುಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು ದನಗಳು ನೋವಿನಿಂದ ನರಳುತ್ತಿವೆ. ಗುಂಡಿಮಾಳ ರೈತರ ದನಕರುಗಳು ಟಿಬೇಟಿಯನ್ ರೈತನ ಜೋಳದ ಹೊಲಕ್ಕೆ ಮೇಯಲು ಹೋಗಿದ್ದವು. ಈ ವೇಳೆ ಟಿಬೇಟಿಯನ್ ರೈತ ಕಿಟುಪ್ ದನಕರುಗಳ ಮೇಲೆ ಎರ್ರಾಬಿರ್ರಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಕೊಂಬು, ಬಾಲ, ಕಾಲು ಹೀಗೆ ದನಕರಗಳ ಅಂಗಾಂಗಗಳಿಗೆ ಮಚ್ಚಿನೇಟು ಬಿದ್ದಿದೆ. ಗಾಯಗೊಂಡ ದನಕರುಗಳ ಮೂಕರೋಧನೆ ಕಲ್ಲು ಹೃದಯವಿರುವ ಮನುಷ್ಯರ ಕಣ್ಣಲ್ಲೂ ನೀರು ತರಿಸುವಂತಿದೆ. ಹಸು, ಎತ್ತುಗಳು ನಡೆಯಲಾರದೆ ಹೊಲದಲ್ಲೇ ಕುಸಿದು ಬೀಳುತ್ತಿವೆ. ಇದರಿಂದ ಜೀವನೋಪಾಯಕ್ಕಾಗಿ ದನಕರುಗಳನ್ನೇ ಅವಲಂಬಿಸಿರುವ ಗುಂಡಿಮಾಳ ರೈತರು ಕಣ್ಣೀರು ಹಾಕುತ್ತಿದ್ದಾರೆ.
![](https://www.prathinidhi.net/wp-content/uploads/2024/03/chm-cow-assault.webp)