ಮೈಸೂರು, ಜುಲೈ 11, 2026: ಮುಂಬರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಮೈಸೂರಿನ ಜನರ ಭಾವನೆಗಳಿಗೆ ಗೌರವ ನೀಡಬೇಕು ಮತ್ತು ಈ ವಿಷಯದಲ್ಲಿ ಯಾವುದೇ ರೀತಿಯ ಭಂಡತನ ಪ್ರದರ್ಶನ ಮಾಡಬಾರದು ಎಂದು ಆಗ್ರಹಿಸಿದರು.
ದಸರಾ ವೇಳೆ ಮೈಸೂರಿನಲ್ಲಿ ಕಂಬಳ ನಡೆಸುವುದು ಬೇಡ ಎಂದ ಅವರು, ಕರಾವಳಿಯ ಆಚರಣೆಯಾದ ಕಂಬಳವನ್ನು ಸರ್ಕಾರ ಅಲ್ಲೇ ಅತ್ಯಂತ ಅದ್ದೂರಿಯಾಗಿ ಆಯೋಜಿಸಲಿ ಎಂದು ಸಲಹೆ ನೀಡಿದರು. ಕರಾವಳಿಯ ಪರಂಪರೆಯನ್ನು ತಂದು ಮೈಸೂರಿನ ಸಾಂಪ್ರದಾಯಿಕ ಪರಂಪರೆಗೆ ತುರುಕುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಿದ ವಿಜಯೇಂದ್ರ, ಕಂಬಳಕ್ಕೂ ತನ್ನದೇ ಆದ ವಿಶಿಷ್ಟ ಶ್ರೀಮಂತಿಕೆ ಹಾಗೂ ಇತಿಹಾಸವಿದೆ, ಅದನ್ನು ಸರ್ಕಾರ ಹಾಗೆಯೇ ಉಳಿಸಿಕೊಂಡು ಹೋಗಬೇಕು ಎಂದು ಪ್ರತಿಪಾದಿಸಿದರು.
ಕರಾವಳಿ ಭಾಗದಲ್ಲಿ ಸರ್ಕಾರ ಕಂಬಳವನ್ನು ಇನ್ನೂ ಸಡಗರ-ಸಂಭ್ರಮದಿಂದ ಆಚರಿಸಲಿ, ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಸ್ಪಷ್ಟಪಡಿಸಿದ ಅವರು, ಮೈಸೂರು ದಸರಾದ ಮೂಲ ಸೊಗಡಿಗೆ ಧಕ್ಕೆ ತರದಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
