ಹುಣಸೂರು, ಜನವರಿ 16, 2026 : ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿಯಲ್ಲಿ ತಡರಾತ್ರಿ ಪ್ರಾವಿಷನ್ ಸ್ಟೋರ್ ಒಂದಕ್ಕೆ ನುಗ್ಗಿದ ಕಳ್ಳನೋರ್ವ ಮಾಲೀಕ ಎಚ್ಚರಗೊಂಡ ಹಿನ್ನೆಲೆಯಲ್ಲಿ ಬರಿಗೈಲಿ ಪರಾರಿಯಾದ ಘಟನೆ ನಡೆದಿದೆ.
ಗ್ರಾಮದ ಕೆ.ಆರ್. ನಗರ ಮುಖ್ಯ ರಸ್ತೆಯಲ್ಲಿರುವ ಈ ಅಂಗಡಿಗೆ ಮೊಬೈಲ್ ಬ್ಯಾಟರಿ ಬೆಳಕಿನ ಸಹಾಯದಿಂದ ನುಗ್ಗಲು ಯತ್ನಿಸಿದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಕಳ್ಳ ಒಳಬರುತ್ತಿದ್ದಂತೆಯೇ ಮಾಲೀಕರು ಎಚ್ಚರಗೊಂಡಿದ್ದರಿಂದ ಗಾಬರಿಗೊಂಡ ಖದೀಮ ಸ್ಥಳದಿಂದ ಓಡಿ ಹೋಗಿದ್ದಾನೆ. ಈ ಘಟನೆಯು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಇತ್ತೀಚೆಗಷ್ಟೇ ಹುಣಸೂರಿನ ಚಿನ್ನದಂಗಡಿಯೊಂದರಲ್ಲಿ ಹಾಡುಹಗಲೇ ನುಗ್ಗಿದ್ದ ಮುಸುಕುಧಾರಿಗಳು ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದರು. ಇದರ ಬೆನ್ನಲ್ಲೇ ಮೈಸೂರು ನಗರದಲ್ಲಿ ಸರಣಿ ಬೈಕ್ ಕಳ್ಳತನಗಳು, ಪಿರಿಯಾಪಟ್ಟಣದ ಬೈಲಕುಪ್ಪೆಯಲ್ಲಿ ಅಡಿಕೆ ತೋಟ ಹಾಗೂ ಮೊಬೈಲ್ ಅಂಗಡಿಗಳಿಗೆ ಕನ್ನ ಹಾಕಿದ ಪ್ರಕರಣಗಳು ವರದಿಯಾಗಿವೆ. ನಂಜನಗೂಡು ಭಾಗದಲ್ಲಿ ಹಸುಗಳ ಕಳ್ಳತನವೂ ನಡೆಯುತ್ತಿದ್ದು, ಜಿಲ್ಲೆಯಾದ್ಯಂತ ದರೋಡೆಕೋರರ ಕಾಟಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಸತತವಾಗಿ ನಡೆಯುತ್ತಿರುವ ಈ ಅಪರಾಧ ಕೃತ್ಯಗಳು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.
