ಮೈಸೂರು, ಡಿಸೆಂಬರ್ 29, 2025 : ಜಿಲ್ಲೆಯ ಮೈಸೂರು ತಾಲ್ಲೂಕಿನ ಕೆ. ಹೆಮ್ಮನಹಳ್ಳಿಯಲ್ಲಿ ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆ ನಾಶಪಡಿಸಿರುವ ಘಟನೆ ವರದಿಯಾಗಿದೆ. ಮಂಜುಳಾ, ಸೌಮ್ಯ ಹಾಗೂ ರಮ್ಯಾ ಎಂಬುವವರಿಗೆ ಸೇರಿದ ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಹುರಳಿ ಬೆಳೆಯನ್ನು ಜೆಸಿಬಿ ಬಳಸಿ ನಾಶಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸಿಟಿಜನ್ ವೆಲ್ ಫೇರ್ ಸೊಸೈಟಿಯವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಈ ಜಮೀನನ್ನು ನಾವು ಖರೀದಿ ಮಾಡಿದ್ದೇವೆ ಎಂಬ ಕಾರಣ ನೀಡಿ ಅವರು ಬೆಳೆ ಧ್ವಂಸ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.

ಮೂಲಗಳ ಪ್ರಕಾರ, ಸೌಮ್ಯ ಹಾಗೂ ರಮ್ಯ ಅವರ ತಂದೆ ಕುಮಾರ್ ಅವರು ಈ ಹಿಂದೆ ವೀರೇಶ್ ಎಂಬುವವರಿಗೆ ಜಮೀನಿನ ಅಗ್ರಿಮೆಂಟ್ ಹಾಗೂ ಜಿಪಿಎ ಮಾಡಿಕೊಟ್ಟಿದ್ದರು. ಆದರೆ ಜಮೀನನ್ನು ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡಿರಲಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಸದ್ಯ ಮೈಸೂರು ಸಿವಿಲ್ ಕೋರ್ಟ್ನಲ್ಲಿ ಪ್ರಕರಣ ಬಾಕಿ ಇರುವಾಗಲೇ, ವೀರೇಶ್ ಅವರಿಂದ ಜಮೀನು ಖರೀದಿ ಮಾಡಿರುವುದಾಗಿ ಸೊಸೈಟಿ ಹೇಳಿಕೊಂಡಿದೆ.
ಈ ವಿವಾದದ ಹಿನ್ನೆಲೆಯಲ್ಲಿ ವೀರೇಶ್, ಜಯಕುಮಾರ್, ರುದ್ರೇಶ್ ಹಾಗೂ ಬೆಳವಾಡಿ ಮಹದೇವ ಸೇರಿದಂತೆ ಇತರರು ಜೆಸಿಬಿ ತಂದು ಜಮೀನಿನಲ್ಲಿದ್ದ ಬೆಳೆಯನ್ನು ನಾಶಪಡಿಸಿದ್ದಾರೆ ಎಂದು ಸಂತ್ರಸ್ತ ಕುಟುಂಬದವರು ಆರೋಪಿಸಿದ್ದಾರೆ. ಇದನ್ನು ತಡೆಯಲು ಮುಂದಾದ ಸೌಮ್ಯ ಅವರ ಪತಿ ಹರೀಶ್ ಹಾಗೂ ತಮ್ಮ ಮಂಜು ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
