ಮೈಸೂರು, ಡಿಸೆಂಬರ್ 4, 2025 : ಮೈಸೂರಿನ ಜಿಎಸ್ಎಸ್ ಸಿಎಸ್ಆರ್ ತಂಡದ ವತಿಯಿಂದ ಮೈಸೂರು ಕಟ್ಟೋಣ – ಬನ್ನಿ ಮೈಸೂರಿನ ಋಣ ತೀರಿಸೋಣ, ಎಲ್ಲರೂ ಸೇರಿ ಮೈಸೂರನ್ನು ಕಟ್ಟೋಣ ಬನ್ನಿ! ಎಂಬ ವಿನೂತನ ಅಭಿಯಾನ ಆರಂಭ ಮಾಡಲಾಗಿದೆ.
ಜಿಎಸ್ಎಸ್ ಸಂಸ್ಥೆ ಮತ್ತು ಪ್ರತಿನಿಧಿ ಫೌಂಡೇಷನ್ನ ಸಂಯುಕ್ತಾಶ್ರಯದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಇದರ ಕುರಿತು ಜಿಎಸ್ಎಸ್ ಯೋಗಿಕ್ ರಿಸರ್ಚ್ ಫೌಂಡೇಶನ್ನ ಸಂಸ್ಥಾಪಕರಾದ ಡಿ. ಶ್ರೀಹರಿ ಅವರು ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಿರಿಯರ ಕೊಡುಗೆ ಉಳಿಸಿ, ನಾಗರಿಕರ ಜಾಗೃತಿ
ನಗರದ ಹಿರಿಯರು ನೀಡಿರುವ ಅನನ್ಯ ಕೊಡುಗೆಗಳನ್ನು ಉಳಿಸಿ, ಬೆಳೆಸುವ ಮತ್ತು ನಗರಾಭಿವೃದ್ಧಿ ಕಾರ್ಯಗಳಲ್ಲಿ ನಾಗರಿಕರನ್ನು ಜಾಗೃತಗೊಳಿಸುವ ಪ್ರಮುಖ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಶ್ರೀಹರಿ ತಿಳಿಸಿದರು.
ಅಭಿಯಾನವನ್ನು ಮೈಸೂರು ಜಿಎಸ್ಎಸ್ ಸಿಎಸ್ಆರ್ ತಂಡವು ಮುನ್ನಡೆಸುತ್ತಿದ್ದು, ನಗರದ ಸಮಗ್ರ ಅಭಿವೃದ್ಧಿಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳೆಂದರೆ:
-
ಗ್ರೀನ್ ಮೈಸೂರು (Green Mysuru)
-
ಸೇಫ್ ಮೈಸೂರು (Safe Mysuru)
-
ಸ್ಕಿಲ್ ಮೈಸೂರು (Skill Mysuru)
-
ಎಜುಕೇಷನಲ್ ಮೈಸೂರು (Educational Mysuru)
-
ಕಲ್ಚರಲ್ ಮೈಸೂರು (Cultural Mysuru)
-
ಹೆಲ್ತೀ ಮೈಸೂರು (Healthy Mysuru)
ಈ ಕಾರ್ಯಕ್ರಮಗಳ ಮೂಲಕ ಮೈಸೂರಿನ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸಲು ಉದ್ದೇಶಿಸಲಾಗಿದೆ. ಹಾಗೂ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾಗಲು ಮೈಸೂರಿನ ಎಲ್ಲಾ ನಾಗರೀಕರು, ಎನ್ ಜಿ ಓಗಳು (NGOs) ಮತ್ತು ಸಮಾಜಮುಖಿ ಸಂಸ್ಥೆಗಳು ಕೈಜೋಡಿಸಬೇಕು ಎಂದು ಡಿ. ಶ್ರೀಹರಿ ಅವರು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿನಿಧಿ ಪ್ರಾದೇಶಿಕ ದಿನಪತ್ರಿಕೆಯ ಪ್ರಧಾನ ಸಂಪಾದಕ ಸಿ ಕೆ ಮಹೇಂದ್ರ, ಜಿಎಸ್ಎಸ್ ಸಂಸ್ಥೆಯ ಸರಳ, ನಿವೃತ್ತ ಅಧಿಕಾರಿ ಶಶಿಕುಮಾರ್ ಉಪಸ್ಥಿತರಿದ್ದರು.
