ಮೈಸೂರು, ನವೆಂಬರ್ 26, 2025 : ಷಷ್ಠಿ ಹಬ್ಬದ ಪ್ರಯುಕ್ತ ಮೈಸೂರು ಹೊರವಲಯದ ಸಿದ್ದಲಿಂಗಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲಕ್ಕೆ ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡ (ಜಿಟಿಡಿ) ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಸಿದ ಬಳಿಕ ಪ್ರತಿನಿಧಿ ನ್ಯೂಸ್ ಜೊತೆ ಮಾತನಾಡಿದ ಶಾಸಕ ಜಿಟಿಡಿ, ದೇಗುಲದ ಮಹತ್ವ ಮತ್ತು ಭಕ್ತರ ನಂಬಿಕೆಗಳ ಕುರಿತು ಮಾತನಾಡಿದರು. ನಾನು ಷಷ್ಠಿಯ ದಿನವೇ ಜನಿಸಿದ್ದು. ಹಾಗಾಗಿ ಈ ಹಬ್ಬಕ್ಕೆ ವಿಶೇಷ ಮಹತ್ವ ನೀಡುತ್ತೇನೆ. ಸಿದ್ದಲಿಂಗಪುರದ ಸುಬ್ರಹ್ಮಣ್ಯಸ್ವಾಮಿ ದೇಗುಲಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ ಎಂದು ಜಿಟಿಡಿ ಹೇಳಿದರು.
ಈ ಸ್ಥಳದಲ್ಲಿ ಹರಕೆ ಮಾಡಿಕೊಂಡರೆ ಒಳಿತಾಗುತ್ತದೆ ಎಂಬ ಪ್ರಬಲ ನಂಬಿಕೆಯಿದೆ. ತಮಿಳುನಾಡು ಮೂಲದ ಉದ್ಯಮಿಯೊಬ್ಬರು ಇಲ್ಲಿಗೆ ಬಂದು ಹೋದನಂತರ ಅವರಿಗೆ ಶುಭವಾಗಿದೆಯಂತೆ. ಹಾಗಾಗಿ, ಅವರೇ ಶಿಥಿಲಗೊಂಡಿದ್ದ ಈ ದೇಗುಲವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿಸಿದ್ದಾರೆ ಎಂದು ದೇಗುಲದ ಇತಿಹಾಸವನ್ನು ವಿವರಿಸಿದರು.
ಭಕ್ತರಿಗೆ ಮೂಲಭೂತ ಸೌಕರ್ಯದ ಭರವಸೆ
ದೇಗುಲಕ್ಕೆ ಆಗಮಿಸುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ಸ್ಥಳೀಯರು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಸಕರ ಗಮನಕ್ಕೆ ತಂದಿದ್ದಾರೆ. ಇಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಿಕೊಡಿ ಎಂದು ಈಗ ನನ್ನ ಗಮನಕ್ಕೆ ತಂದಿದ್ದಾರೆ. ಮುಂಬರುವ ದಿನಗಳಲ್ಲಿ ಭಕ್ತರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇಲೆ ಒದಗಿಸಿಕೊಡುತ್ತೇನೆ ಎಂದು ಶಾಸಕ ಜಿ.ಟಿ. ದೇವೇಗೌಡರು ಭರವಸೆ ನೀಡಿದರು.

