ಮೈಸೂರು, ನವೆಂಬರ್ 12, 2025:ಅನಾರೋಗ್ಯದಿಂದ ಬಳಲುತ್ತಿದ್ದರೂ ರಜೆ ನೀಡದೆ ಸತತವಾಗಿ ಕರ್ತವ್ಯ ನಿರ್ವಹಿಸುವಂತೆ ಒತ್ತಾಯಿಸಿದ್ದ ಸೂಪರ್ವೈಸರ್ ಕಿರುಕುಳದಿಂದ ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ, ಇಂದು ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಭಾರೀ ಪ್ರತಿಭಟನೆ ನಡೆಯಿತು.
ಕರ್ನಾಟಕ ಯುನೈಟೆಡ್ ಸೆಕ್ಯೂರಿಟಿ ವರ್ಕರ್ಸ್ ಯೂನಿಯನ್ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಜರಾಜೇಶ್ವರಿ ಸೆಕ್ಯೂರಿಟಿ ಏಜೆನ್ಸಿ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜಯ್ ಎಂಬುವರೇ ಮೃತ ದುರ್ದೈವಿ. ಇತ್ತೀಚೆಗೆ ಸಂಜಯ್ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ರಜೆ ಕೇಳಿದ್ದರೂ ಸಹ, ಸೂಪರ್ವೈಸರ್ ಆಗಿರುವ ಅರುಣ್ ಕುಮಾರ್ ಅವರು ರಜೆ ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಸೂಪರ್ವೈಸರ್ ಒತ್ತಡದಿಂದಾಗಿ ಸಂಜಯ್ ಅವರು ಸತತ 11 ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಪರಿಣಾಮವಾಗಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು, ಕರ್ತವ್ಯ ನಿರ್ವಹಿಸುವಾಗಲೇ ಸಾವನ್ನಪ್ಪಿದ್ದಾರೆ.
ಸಂಜಯ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಸಹೋದ್ಯೋಗಿ ಸೆಕ್ಯೂರಿಟಿ ಗಾರ್ಡ್ಗಳು ಮತ್ತು ಕಾರ್ಮಿಕ ಮುಖಂಡರು ಸೂಪರ್ವೈಸರ್ ಅರುಣ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಜಯ್ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಸಂಜಯ್ ಅವರಿಗೆ ಮಾನಸಿಕ ಕಿರುಕುಳ ನೀಡಿದ ಸೂಪರ್ವೈಸರ್ ಅರುಣ್ ಕುಮಾರ್ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಬೇಕು. ಇದೇ ವೇಳೆ, ಈ ಘಟನೆಗೆ ಕಾರಣವಾದ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧವೂ ಕಾರ್ಮಿಕ ಮುಖಂಡರು ತೀವ್ರವಾಗಿ ಕಿಡಿಕಾರಿದರು. ಪ್ರತಿಭಟನಾಕಾರರು ನ್ಯಾಯ ದೊರಕುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
