ಚಿಕ್ಕಮಗಳೂರು : ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾಮ ಪತ್ರ ಸಲ್ಲಿಸಲು ಎಪ್ರೆಲ್ 4 ಕೊನೆಯ ದಿನವಾಗಿದ್ದು ಒಟ್ಟು 13 ಜನರು 19 ನಾಮಪತ್ರ ಸಲ್ಲಿಸಿದ್ದಾರೆ.
ಪ್ರಮುಖವಾಗಿ ಬಿ.ಜೆ.ಪಿ ಪಕ್ಷದಿಂದ ಕೋಟಾ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ನಿಂದ ಜಯಪ್ರಕಾಶ್ ಹೆಗ್ಡೆ, ಬಿ.ಎಸ್.ಪಿ ಪಕ್ಷದಿಂದ ಕೆ.ಟಿ ರಾಧಕೃಷ್ಣ, ಉತ್ತಮ ಪ್ರಜಾಕೀಯ ಪಕ್ಷದಿಂದ ಸಚಿನ್ ಬಿ.ಕೆ ಸೇರಿದಂತೆ ಹಲವು ಪಕ್ಷ ಹಾಗು ಪಕ್ಷೇತರ ಅಭ್ಯರ್ಥಿಗಳು ಸೇರಿ 13 ಜನರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ವಾಹನಗಳ ಬದಲಿ ಸಂಚಾರ
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕು ಮಳಲೂರು ಮತ್ತು ಸಾಯಿ ಏಂಜಲ್ಸ್ ಶಾಲೆ ಬಳಿ ಬೇಲೂರು ಹೊಸ ರೈಲು ಮಾರ್ಗದ ಬ್ರಾಡ್ ಗೇಜ್ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವ ರಸ್ತೆಗಳ ವಿವರ: ಸಾಯಿ ಏಂಜಲ್ಸ್ ಶಾಲೆಯ ಮುಂಭಾಗದಲ್ಲಿ ಹೋಗಿರುವ ರಸ್ತೆ, ಚಿಕ್ಕಮಗಳೂರು, ಕೆ.ಆರ್. ಪೇಟೆ, ಗೆಂಡೇಹಳ್ಳಿ ಮಳಲೂರು ಕಡೆಗೆ ಹೋಗುವ ವಾಹನಗಳು ಸಾಯಿ ಏಂಜೆಲ್ಸ್ ಶಾಲೆಯ ಹಿಂಭಾಗದಲ್ಲಿ ಚಿಕ್ಕಮಗಳೂರು, ಗೆಂಡೇಹಳ್ಳಿ ರಸ್ತೆ ಹಾಗೂ ಸಿರ್ಗಾಪುರಕ್ಕೆ ಅಂಬಳೆ, ಚಿಕ್ಕಮಗಳೂರು ಕಡೆಗೆ ಬದಲಿ ರಸ್ತೆಯಲ್ಲಿ ಸಂಚರಿಸುವುದು.
ಪ್ರಸ್ತಾಪಿತ ರೈಲ್ವೆ ಲೆವೆಲ್ ಮಾರ್ಗದಲ್ಲಿ ರೈಲ್ವೆ ಮೇಲು ಸೇತುವೆ ಸಂಖ್ಯೆ: 137 ಕಾಮಗಾರಿ ಜಾಗದಲ್ಲಿ ಕಲ್ಲಳ್ಳಿ ಗ್ರಾಮದ ಕೆರೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿರುವ ಸ್ಥಳದ ರಸ್ತೆ ಕಡೆಗೆ ಹೋಗುವ ವಾಹನಗಳು ಕಲ್ಲಳ್ಳಿ ಗ್ರಾಮದ ಕೆರೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿ ರೈಲ್ವೆ ಕಾಮಗಾರಿ ನಡೆಯುವ ಸ್ಥಳದಿಂದ 200 ಮೀಟರ್ ದೂರದಲ್ಲಿ ಯೂಟರ್ನ್ ತೆಗೆದು ಕೊಂಡು ಬದಲಿ ರಸ್ತೆಯಲ್ಲಿ ಸಂಚರಿಸುವುದು.
ಈ ಮಾರ್ಗಗಳಲ್ಲಿ ಸಂಚರಿಸುವ ವಾಹನಗಳ ಸಂಚಾರವನ್ನು ಮಾರ್ಚ್ 25 ರಿಂದ ಜೂನ್ 24 ರ ವರೆಗೆ ಅಂದರೆ 90 ದಿನಗಳ ಕಾಲ ನಿರ್ಬಂಧಿಸಿದ್ದು, ಸದರಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಸಂದರ್ಭದಲ್ಲಿ ವಾಹನಗಳು ಸಂಚರಿಸಿದ್ದಲ್ಲಿ ಕಾಮಗಾರಿಗೆ ಅಡಚಣೆ ಉಂಟಾಗುವುದಲ್ಲದೆ, ಅಪಘಾತಗಳು ಸಹ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪ್ರಸ್ತಾಪಿತ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸದರಿ ವಾಹನಗಳು ಓಡಾಡಲು ಅವಕಾಶ ಕಲ್ಪಿಸುವುದು ಸೂಕ್ತವೆಂದು ಮನಗಂಡು ಕೇಂದ್ರ ಮೋಟಾರು ವಾಹನಗಳ ಕಾಯೆ 1988 ರ ಕಲಂ 115 ಮತ್ತು ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮದಡಿಯಲ್ಲಿ ಆದೇಶದಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತ ಜನ ಸಂಪರ್ಕ ಸಭೆ
ಚಿಕ್ಕಮಗಳೂರು: ಚಿಕ್ಕಮಗಳೂರು ಲೋಕಾಯುಕ್ತ ಕಛೇರಿ ವತಿಯಿಂದ ಏಪ್ರಿಲ್ 10 ರಂದು ಬೆಳಗ್ಗೆ 11 ಗಂಟೆಗೆ ತರೀಕೆರೆ ಪಟ್ಟಣದಲ್ಲಿನ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ.
ಈ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.