ಹಾಸನ, ಸೆಪ್ಟೆಂಬರ್ 15: ದೇಶವೇ ಅಲ್ಲೋಲ ಕಲ್ಲೋಲ ಆಗುವ ರೀತಿಯ ಸುದ್ದಿ ಕೊಡುತ್ತೇನೆ ಎಂಬ ತಮ್ಮ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಈಗಲೂ ತಮ್ಮ ಮಾತಿಗೆ ಬದ್ಧರಾಗಿರೋದಾಗಿ ಪುನರುಚ್ಛರಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ. ಈಗಿರುವ ಸರ್ಕಾರದ ಮಂತ್ರಿಗಳ ಅಡಿಯೇ ಕೆಪಿಎಸ್ಸಿ, ಎಇಇ ಹಗರಣಗಳು ನಡೆದಿವೆ. ಲಕ್ಷಾಂತರ ಯುವಕರ ಭಾವನೆಗಳನ್ನು ಮಾರಾಟಕ್ಕಿಟ್ಟು ವಸೂಲಿ ಮಾಡಲಾಗಿದೆ. ಇದ್ಯಾವುದನ್ನೂ ನಾನು ಹೇಳುತ್ತಿಲ್ಲ. ದಾಖಲೆಗಳು ಹೇಳುತ್ತಿವೆ. ಅಕ್ರಮಗಳನ್ನ ಜನರ ಮುಂದಿಡುವುದು ನನ್ನ ಜವಾಬ್ದಾರಿ. ತೀರ್ಮಾನ ಜನರದ್ದು ಎಂದವರು ಹೇಳಿದ್ದಾರೆ.
ನಾನು ಒಂದು ಪದ ಬಳಸಿದ್ದಕ್ಕೆ ಕಳೆದ ಹತ್ತು ದಿನಗಳಿಂದ ಕುಮಾರಸ್ವಾಮಿ ಯಾವಾಗ ಬರ್ತಾರೆ? ನಂದೇನಿದೆ, ನಂದೇನಿದೆ ಎಂದು ಎಷ್ಟು ಜನ ರಾತ್ರಿಯೆಲ್ಲಾ ಕನವರಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ಆದರೆ ಮಾಧ್ಯಮ ಸ್ನೇಹಿತರಿಗೆ ನಿರಾಸೆ ಮಾಡಲ್ಲ ಒಳ್ಳೆಯ ಆಹಾರ ಕೊಡ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈಗಾಗಲೇ ರಾಜಣ್ಣರ ಧ್ವನಿ ನಿಲ್ಲಿಸಿದ್ರು, ರಮೇಶ್ ಜಾರಕಿಹೋಳಿ ಮುಗ್ಸಿದ್ರು. ಸತೀಶ್ ಜಾರಕಿಹೊಳಿ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳುತ್ತಿದ್ದರು. ಹೀಗಾಗಿ ಈಗ ಅವರನ್ನೂ ಹೇಗೆ ಮುಗಿಸಬೇಕೆಂದು ಸಿದ್ದತೆ ಮಾಡಿಕೊಂಡರು. ಪಾಪ ನಾಗೇಂದ್ರ ಅವರದ್ದು ಯಾವ್ಯಾವ ತರ ನಡೀತು? ನಂಗೇನೂ ಆತುರ ಇಲ್ಲ. ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದವರು ತಿಳಿಸಿದ್ದಾರೆ.
