ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯ
ಪ್ರತಿನಿಧಿ ವರದಿ ಮದ್ದೂರು
ಸಾಲ ಮನ್ನಾ, ಬಡ್ಡಿ ಮನ್ನಾ ಮಾಡುತ್ತೇನೆ ಎಂದು ಮತ ಪಡೆದು ಜನರಿಗೆ ಮೋಸ ಮಾಡುವ ಕಾಲಘಟ್ಟದಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ದೇಶದಲ್ಲೇ ಮಾದರಿ ಆಡಳಿತ ನೀಡುತ್ತಿದ್ದೇವೆ ಎಂದು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ತಿಮ್ಮದಾಸ್ ಹೊಟೇಲ್ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಾಲ ಮಾಡಿದ್ದಾಗ ಅದು ಸರ್ವರಿಗೂ ತಲುಪುವುದಿಲ್ಲ. ಮುಂದಿನ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ ಯೋಜನೆಗೆ 60 ಸಾವಿರ ಕೋಟಿ ಹಣ ಮೀಸಲುಡಲಾಗಿದೆ. 4000 ಕೋಟಿ ಹಣ ನೀರಾವರಿಗೆ ಮೀಸಲಿಡಲಾಗಿದೆ. ಇದರ ನಡುವೆ ಯಾವುದೇ ಸರ್ಕಾರಿ ಯೋಜನೆಗಳನ್ನು ನಿಲ್ಲಿಸಿಲ್ಲ. ಕೃಷಿ ಇಲಾಖೆಯಿಂದ ಹಲವು ಸೌಲಭ್ಯಗಳನ್ನು ಒದಗಿದಲಾಗಿದೆ. 1200 ಕೋಟಿ ಸಹಾಯಧನ ನೀಡಲಾಗಿದೆ ಎಂದರು.
ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ಮೊಟ್ಟೆ, ರಾಗಿ ಮಾಲ್ಟ್, ನೀಡಲಾಗುತ್ತಿದೆ. ಶಾಸಕರು ಒಬ್ಬರಿಗಿಂತ ಒಬ್ಬರು ಅಭಿವೃದ್ಧಿ ಮಾಡುತ್ತಿದ್ದಾರೆ. ಶಾಸಕರು ನನಗಿಂತ ಹೆಚ್ಚಾಗಿ ಅಭಿವೃದ್ಧಿ ಮಾಡುವ ಚಾಣಾಕ್ಷತನ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಿ.ಸಿ. ತಮ್ಮಣ್ಣ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ
ಕೆ.ಎಂ. ಉದಯ್ ಅವರನ್ನು 25 ಸಾವಿರ ಅಂತರ ಮತಗಳಿಂದ ಗೆಲ್ಲಿಸಿದ್ದಿರಿ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಅಂತರದ ಮತಗಳನ್ನು ನೀಡಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾಸನ ಜೆಡಿಎಸ್ ನವರಿಗೆ ಕರ್ಮಭೂಮಿ ಆಗಿತ್ತು ಈಗ ಮಂಡ್ಯ ಎನ್ನುತ್ತಿದ್ದಾರೆ. ಜಿಲ್ಲೆಯಲ್ಲಿ ಏಳು ಮಂದಿ ಶಾಸಕರಾಗಿದ್ದಾಗ ಅವರು ಯಾವ ಅಭಿವೃದ್ಧಿ ಮಾಡಿದ್ದರು ಎಂದು ಆತ್ಮವಲೋಕನ ಮಾಡಿಕೊಳ್ಳಿ. ನಾಯಕತ್ವವನ್ನು ಮಂಡ್ಯಕ್ಕೆ ಉಳಿಸಿಕೊಳ್ಳಿ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರು, ಮುಖಂಡರು, ನಾಯಕರ ವರೆಗೂ ಯಾವುದೇ ವ್ಯತ್ಯಾಸವಿಲ್ಲ. ಕಾಂಗ್ರೆಸ್ ಗೆಲುವಿನ ಅಲೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಬೇಕು ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ನಿಮ್ಮೆಲ್ಲ ಕಷ್ಟ ಸುಖಗಳಿಗೆ ನಾನು ಸರ್ಕಾರ, ನಮ್ಮ ನಾಯಕರು ಸ್ಪಂದಿಸುತ್ತೇವೆ. 50 ಸಾವಿರ ಇದ್ದ ಅಂತರವನ್ನು ಕಡಿಮೆ ಮಾಡಿ ನನಗೆ 25 ಸಾವಿರ ಅಂತರದ ಮತಗಳನ್ನು ನೀಡಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಿರಿ. ನನಗೆ ನೀಡಿದ ಮತಗಳಿಗಿಂತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇರಮಣೆಗೌಡ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಯಾವುದೇ ಗೊಂದಲಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಬೇರೆಯವರಿಗೆ ಶಕ್ತಿ ಕುಂದೊಗಿದೆ ಕೊನೆಗೆ ಉಳಿರುವುದು ಅಪ ಪ್ರಚಾರ ಮಾತ್ರ ಅದಕ್ಕೆ ಹೆಚ್ಚು ಮನ್ನಣೆ ನೀಡಬೇಡಿ ಎಂದು ವಿರೋಧ ಪಕ್ಷಗಳ ವಿರುದ್ದ ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಶಕ್ತಿ ಯೋಜನೆಯಡಿ 186 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.21 ಲಕ್ಷ ಮಂದಿಗೆ 280 ಕೋಟಿ ಹಣವನ್ನು ಜಮೆ ಮಾಡಲಾಗಿದೆ. 1.67 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ. 4.85 ಕೋಟಿ ಪಡಿತರ ಚೀಟಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಹಣ ಜಮೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ 1.40 ಲಕ್ಷ ನಿರುದ್ಯೋಗಿ ಪದವೀಧರರು ಲಾಭ ಪಡೆದುಕೊಂಡಿದ್ದಾರೆ.
33.60 ಲಕ್ಷ ರೈತರಿಗೆ ಬರ ಪರಿಹಾರದ ಹಣ ಮಂಜೂರು ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಮಂಡ್ಯ ಜಿಲ್ಲೆಯ ರಾಜಕಾರಣ ಮದ್ದೂರಿನ ಸತ್ವದಲ್ಲೆ ಅಡಗಿದೆ. ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ, ಕೃಷಿ ವಿವಿ ಸ್ಥಾಪನೆ. ವಿ.ಸಿ. ನಾಲೆಯ ಆಧುನಿಕರಣಕ್ಕೆ 2000 ಕೋಟಿ ಅನುದಾನ ಒದಗಿಸಲಾಗುತ್ತಿದೆ. ಮಂಡ್ಯ ಜಿಲ್ಲೆಗೆ ಕೃಷಿ ಖಾತೆ ನೀಡುವ ಮೂಲಕ ರೈತರ ಪ್ರಗತಿಗೆ ಸರ್ಕಾರ ಮುಂದಾಗಿದೆ. ಸ್ವಾತಂತ್ರ್ಯ ನಂತರ ಇಂತಹ ಕೊಡುಗೆಗಳನ್ನು ಯಾವ ಸರ್ಕಾರವು ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಕೊಟ್ಟಿದೆ ಎಂದು ಬಣ್ಣಿಸಿದರು.
ಐದು ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದ ಸರ್ಕಾರವಾಗಿದ್ದು, ವಿಶ್ವದ ಯಾವುದೇ ದೇಶದಲ್ಲಿ ಜಾರಿಯಲಿಲ್ಲದ ಗ್ಯಾರಂಟಿಗಳು ನಾಡಿನ ಜನತೆಗೆ ಕೊಟ್ಟಿದೆ ಎಂದರು.
ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಬರ ಪರಿಹಾರ ಹಾಗೂ ತೆರಿಗೆ ಪಾಲನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ದೂರಿದರು.
ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಮಧು ಜಿ. ಮಾದೇಗೌಡ, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ ಅವರು ಮಾತನಾಡಿದರು.
ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಮಾಜಿ ಶಾಸಕ ಬಿ. ರಾಮಕೃಷ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಜಿಲ್ಲಾ ಕಾರ್ಯದರ್ಶಿ ಚಿದಂಬರಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕದಲೂರು ರಾಮಕೃಷ್ಣ, ಶಿವಲಿಂಗೇಗೌಡ, ಜಿ.ಪಂ ಮಾಜಿ ಸದಸ್ಯರಾದ ಸುರೇಶ್ ಕಂಠಿ, ರಾಜೀವ್, ಬಸವರಾಜು, ಮುಖಂಡರಾದ ಎಂ.ಸಿ. ಬಸವರಾಜು, ಮಾರಸಿಂಗನಹಳ್ಳಿ ರಾಮಚಂದ್ರ, ಇಂತಿಯಾಜ್, ಹೊಂಬಯ್ಯ ಸೇರಿದಂತೆ ಇತರರಿದ್ದರು.
ಮದ್ದೂರು ಪಟ್ಟಣದ ಸೋಮನಹಳ್ಳಿ ಗ್ರಾಮದ ತಿಮ್ಮದಾಸ್ ಹೊಟೇಲ್ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಸಚಿವ ಎನ್. ಚಲುವರಾಯಸ್ವಾಮಿ ಅವರು ಉದ್ಘಾಟಿಸಿದರು. ಮದ್ದೂರು ಪಟ್ಟಣದ ಸೋಮನಹಳ್ಳಿ ಗ್ರಾಮದ ತಿಮ್ಮದಾಸ್ ಹೊಟೇಲ್ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ನಾಯಕರನ್ನು ಅಭಿನಂದಿಸಲಾಯಿತು.