ಪ್ರತಿನಿಧಿ ವರದಿ ಮಾಲೂರು
ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತ ಚಲಾಯಿಸುವುದು ನಮ್ಮ ಹಕ್ಕು. ತಪ್ಪದೆ ಎಲ್ಲರೂ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ರವಿಚಂದ್ರ ತಿಳಿಸಿದರು.
ತಾಲೂಕು ಪಂಚಾಯಿತಿ ಮತ್ತು ಮಾಲೂರು ತಾಲೂಕು ಆಡಳಿತದ ಸ್ಟೀಪ್ ಸಮಿತಿ, ಶಿಕ್ಷಣ ಇಲಾಖೆ ವತಿಯಿಂದ ಮತದಾನ ಜಾಗೃತಿ ಅಂಗವಾಗಿ ಟೇಕಲ್ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾನದ ಜಾಗೃತಿ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ರಂಗೋಲಿಯನ್ನು ಆಕರ್ಷಣೀಯವಾಗಿ ಬಿಡಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಮತದಾನ ಮಾಡುವುದು ಪ್ರತಿ ಮತದಾರರರ ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೆ ಮತ ಚಲಾಯಿಸಿ. ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ಶಿಕ್ಷಾರ್ಹ. ಮತದಾನದ ದಿನವಾದ ಏ.26ರಂದು ಸಾರ್ವಜನಿಕ ರಜೆ ಇದ್ದು, ತಪ್ಪದೇ ಎಲ್ಲರೂ ಮತದಾನ ಮಾಡಬೇಕು. ಮತದಾನದ ಜಾಗೃತಿ ಅಂಗವಾಗಿ ನನ್ನ ಈ ಮತ ನನ್ನ ಹಕ್ಕು ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ತಾಲೂಕು ಪಂಚಾಯತಿ ಇಒ ವೀಣಾ, ಬಿಇಒ ಚಂದ್ರಕಲಾ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಂಜುಳಾ, ಜವರೇಗೌಡ, ರಮೇಶ್ ನಾಯಕ್, ಅಂಬರೀಶ್, ಭಾನುಮತಿ, ಹರೀಶ್, ಪುರುಷೋತ್ತಮ್, ಹೇಮಂತ್ ಚೌಹಣ್ ಸೇರಿದಂತೆ ಮಹಿಳಾ ಸಂಘಟನೆಗಳು, ಆಟೋ ಚಾಲಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.