ರಾಮನಗರ : ಸತ್ಯ, ಅಹಿಂಸೆ ಮತ್ತು ಶಾಂತಿ ಈ ಮೂರು ಮಾರ್ಗಗಳೇ ಮಹಾತ್ಮ ಗಾಂಧೀಜಿಯವರ ಯಶಸ್ವಿಯ ಸೂತ್ರಗಳಾಗಿದ್ದವು ಎಂದು ಹರಿಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ರಾಮನಗರ ಪಿರಮಿಡ್ ಧ್ಯಾನ ಮಂದಿರದ ವತಿಯಿಂದ ಶನಿವಾರ ಆಯೋಜಿಸಿದ್ದ ಸಸ್ಯಾಹಾರ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಈ ಸೂತ್ರಗಳ ಆಧಾರದಿಂದಲೇ ಗಾಂಧೀಜಿಯವರು ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಸತ್ಯ, ಅಹಿಂಸೆಯ ಮಾರ್ಗವನ್ನೇ ಸ್ವಾತಂತ್ರ್ಯ ಚಳವಳಿಗೆ ಅನುಸರಿಸಿದರು. ಹಿಂಸೆಗೆ ಹಿಂಸೆ ಉತ್ತರವಲ್ಲ ಎನ್ನುವ ಸಿದ್ಧಾಂತ ಅವರದಾಗಿತ್ತು ಎಂದು ತಿಳಿಸಿದರು.
ಸ್ವಾತಂತ್ರ್ಯಕ್ಕಾಗಿ ಜನಶಕ್ತಿಯನ್ನು ಕಟ್ಟಿದರು, ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಧರಣಿ ಸತ್ಯಾಗ್ರಹಗಳನ್ನು ಚಳವಳಿಗಾಗಿ ಬಳಸಿಕೊಂಡು ವಿಶ್ವದ ಜನಮನವನ್ನು ಗೆದ್ದರು. ಗಾಂಧೀಜಿ ಅವರಿಗೆ ಮಹಾತ್ಮಾ ಎಂದು ಕರೆಯಲು ಅವರು ಮಾಡಿದ ತ್ಯಾಗ, ಅಹಿಂಸಾ ಮಾರ್ಗಗಳೆ ಕಾರಣ ಎಂದು ಅವರು ಹೇಳಿದರು.
ಮಹಾತ್ಮಾ ಗಾಂಧಿಯವರ ವಿಚಾರಗಳು ಇಂದಿಗೂ ನಾಳಿಗೂ ಅಮರವಾಗಿವೆ. ಅಸ್ಪೃಶ್ಯತೆಯ ನಿವಾರಣೆಗೆ ಸಕ್ರಿಯವಾಗಿ ತೊಡಗಿಸಿಕೊಂಡವರು ಗಾಂಧೀಜಿಯವರು ಎಂದು ತಿಳಿಸಿದರು.
ರಾಮನಗರ ಪಿರಮಿಡ್ ಧ್ಯಾನ ಮಂದಿರದ ಸಂಸ್ಥಾಪಕ ಎನ್. ಕೃಷ್ಣಪ್ಪ ಮಾತನಾಡಿ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಬಾಲ್ಯದಲ್ಲಿ ತಿಳಿಸಿದರೆ ಉನ್ನತ ಮಟ್ಟಕ್ಕೆ ಮುಟ್ಟುತ್ತಾರೆ. ಮನುಷ್ಯರು ಹೆಚ್ಚು ಸಸ್ಯಾಹಾರಿಗಳಾಗಿದ್ದರೆ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ತಿಳಿಸಿದರು.
ಯೋಗ ಹಾಗೂ ನಿಯಮಿತ ನಿದ್ರೆಯಿಂದ ಉತ್ತಮ ಆರೋಗ್ಯ ಹಾಗೂ ಚೈತನ್ಯ ಪಡೆಯಲು ಸಾಧ್ಯ. ಬೆಳೆಯುವ ಹುಡುಗರ ಮೇಲೆ ಮೊಬೈಲ್ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳನ್ನು ಮೊಬೈಲ್ನಿಂದ ದೂರವಿಡಿ ಎಂದು ಸಲಹೆ ನೀಡಿದರು.
ಇಂದಿನ ಒತ್ತಡದ ಜೀವನ ಹಾಗೂ ಅನಾರೋಗ್ಯಕರ ಜೀವನ ಶೈಲಿ ಯುವ ಸಮುದಾಯದಲ್ಲಿ ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳು ಹೆಚ್ಚಳವಾಗಲು ಕಾರಣವಾಗುತ್ತಿವೆ. ಧ್ಯಾನ ಮಾಡುವುದು ಸೇರಿದಂತೆ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ರೋಗಗಳಿಂದ ದೂರವಿರಬಹುದು ಎಂದರು.
ಪಿರಮಿಡ್ ಧ್ಯಾನ ಮಂದಿರದಿಂದ ಹೊರಟ ಸಸ್ಯಹಾರ ಜನಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗುರುಭವನದಲ್ಲಿ ಪಿರಮಿಡ್ ಮೆಡಿಟೇಷನ್ ಅಕಾಡೆಮಿ ವತಿಯಿಂದ ಸಂಗೀತ ಧ್ಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮರ್ಷಿ ಪ್ರೇಮನಾಥ ಗುಪ್ತ, ಗೀತಾಯಾದವ್, ಪ್ರಭಾಕರ್, ಚಂದು, ಸುರೇಂದ್ರ, ಸುರನಾಗಾಂಬಿಕಾ ಇತರರು ಇದ್ದರು.